ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ನಿಂದ ನವೆಂಬರ್ ವರೆಗೂ ಕೇವಲ ನಾಲ್ಕು ತಿಂಗಳಲ್ಲಿ 217 ಪ್ರಕರಣಗಳೊಂದಿಗೆ ಈ ವರ್ಷದ ನವೆಂಬರ್ ವರೆಗೂ ರಾಜ್ಯದಲ್ಲಿ 348 ಬಾಣಂತಿಯರ ಸಾವು ದಾಖಲಾಗಿದೆ.
ಈ ಪೈಕಿ 179 ಮಂದಿ ಸರ್ಕಾರಿ ಆಸ್ಪತ್ರೆಗಳು ಹಾಗೂ 38 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್ ಮತ್ತು ನವೆಂಬರ್ ನಡುವೆ ರಾಜ್ಯದಲ್ಲಿ ಪ್ರತಿ ತಿಂಗಳು 50 ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ವರದಿಯಾಗಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ನಂತರ ರಿಂಗರ್ಸ್ ಲ್ಯಾಕ್ಟೇಟ್ IV ದ್ರಾವಣ ಪರಿಶೀಲನೆಗೆ ಒಳಪಟ್ಟಿದ್ದು, ಹೆರಿಗೆ ವೇಳೆ ಅತ್ಯಧಿಕ ರಕ್ತ ಸ್ರಾವ, ಅಂಟಿಬಯೋಟಿಕ್ , ವೃತ್ತಿಪರ ವೈದ್ಯರ ಕೊರತೆ ಮತ್ತಿತರ ಕಾರಣಗಳಿರಬಹುದು ಎಂದು ತಜ್ಞರು ಪ್ರತಿಪಾದಿಸುತ್ತಾರೆ. ರಿಂಗರ್ಸ್ ಲ್ಯಾಕ್ಟೇಟ್ ಮಾತ್ರ ಕಾರಣ ಅಂತಾ ಪರಿಗಣಿಸಬಾರದು, ಮತ್ತಿತರ ಅಂಶಗಳನ್ನು ಪರಿಗಣಿಸಬೇಕು. ಸಾವಿಗೆ ನಿಜವಾದ ಕಾರಣ ತಿಳಿಯಲು ಒಟ್ಟಾರೇ ಚಿಕಿತ್ಸಾ ಪ್ರಕ್ರಿಯೆ ಮತ್ತು ಆಧಾರವಾಗಿರುವ ವೈದ್ಯಕೀಯ ಪರಿಸ್ಥಿತಿಗಳ ವಿವರವಾದ ತನಿಖೆಯ ಅಗತ್ಯವಿದೆ ಎನ್ನಲಾಗಿದೆ.
ರಿಂಗರ್ಸ್ ಲ್ಯಾಕ್ಟೇಟ್ ನಂತಹ IV ದ್ರಾವಣಗಳು ಒಂದು ವೇಳೆ ಅವಧಿ ಮುಗಿದಿದ್ದರೆ ಅಥವಾ ಅಸಮರ್ಕವಾಗಿ ಅವುಗಳನ್ನು ಪೂರೈಸಿದ್ದರೆ, ಆ ದ್ರಾವಣ ಬಾಣಂತಿಯರ ರಕ್ತ ಪ್ರವೇಶಿಸಿದ ಕೂಡಲೇ ಅಲರ್ಜಿ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಇದು ಹಠಾತ್ ಹೃದಯರಕ್ತನಾಳದ ಕುಸಿತ, ಉಸಿರಾಟದ ತೊಂದರೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ ಪ್ರಸವಾನಂತರದ ರಕ್ತಸ್ರಾವವು ತಾಯಿಯ ಮರಣಕ್ಕೆ ಪ್ರಮುಖ ಕಾರಣವೂ ಆಗಬಹುದು ಎನ್ನಲಾಗಿದೆ.