ಹೊಸದಿಗಂತ ಡಿಜಿಟಲ್ ಡೆಸ್ಕ್:
ನುಹ್ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮಾತೃಶಕ್ತಿ ದುರ್ಗಾ ವಾಹಿನಿಯ ಬ್ರಜಮಂಡಲ ಯಾತ್ರೆಯ ಮೇಲೆ ಸೋಮವಾರ ಮುಸ್ಲಿಂ ಗುಂಪುಗಳು ನಡೆಸಿದ ಹಿಂಸಾಚಾರ ರಾಷ್ಟ್ರಾದ್ಯಂತ ಸುದ್ದಿಯಾಗಿದೆ.
ಹಿಂದು ಯಾತ್ರಾರ್ಥಿಗಳು ಎದುರಿಸಿದ ಹಿಂಸಾಚಾರ ಅದೆಂಥ ಭಯಾನಕಮಟ್ಟದಲ್ಲಿತ್ತು ಎಂಬುದಕ್ಕೆ, ಉದ್ರಿಕ್ತ ಮುಸ್ಲಿಂ ಗುಂಪು ಆ ಪ್ರದೇಶದ ಹಾದಿಯಲ್ಲಿ ಬರುತ್ತಿದ್ದ ನ್ಯಾಯಾಧೀಶರೊಬ್ಬರ ಮೇಲೆ ತೋರಿದ ವರ್ತನೆಯೂ ಸಾಕ್ಷಿ ಹೇಳುತ್ತಿದೆ. ನುಹ್ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು ಅವರ ಮೂರು ವರ್ಷದ ಮಗಳು ಬಸ್ ನಿಲ್ದಾಣದ ಕಾರ್ಯಾಗಾರದಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿರುವ ಘಟನೆ ಈಗ ಬೆಳಕಿಗೆ ಬಂದಿದೆ.
ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನ್ಯಾಯಾಧೀಶ ಅನಿಲ ಜೈನ್ ಅವರು ಔಷಧಿಗಳನ್ನು ಖರೀದಿಸಿ ತಮ್ಮ ಕಾರಿನಲ್ಲಿ ವಾಪಸಾಗುವಾಗ 100-150 ಉದ್ರಿಕ್ತರ ಗುಂಪೊಂದು ನ್ಯಾಯಾಧೀಶರ ಕಾರಿನ ಮೇಲೆರಗಿದೆ. ಗನ್ ಮ್ಯಾನ್ ಇದ್ದರೂ ಪ್ರಾಣ ಉಳಿಸಿಕೊಳ್ಳಲು ತಮ್ಮ ಮಗಳೊಂದಿಗೆ ಕಾರಿನಿಂದ ಇಳಿದು ಓಡಿದ್ದಾರೆ. ತಕ್ಷಣಕ್ಕೆ ಹತ್ತಿರದ ಬಸ್ ನಿಲ್ದಾಣದಲ್ಲಿ ಅಡಗಿಕೊಂಡಿದ್ದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಅಂತಿಮವಾಗಿ ಕೆಲವು ವಕೀಲರ ಸಹಾಯದೊಂದಿಗೆ ಮಗಳೊಂದಿಗೆ ಮನೆ ಸೇರುವುದಕ್ಕೆ ನ್ಯಾಯಾಧೀಶರು ಸಫಲರಾದರು. ಅವರ ಕಾರು ಮಾತ್ರ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ನುಹ್ ಶಿವ ದೇವಾಲಯಕ್ಕೆ ತೆರಳುತ್ತಿದ್ದ ಹಿಂದು ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಮುಸ್ಲಿಂ ಗುಂಪುಗಳು ನಡೆಸಿದ ಹಿಂಸಾಚಾರದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಗಲಭೆಯಲ್ಲಿ ಗಾಯಗೊಂಡಿದ್ದು, ಯಾತ್ರೆಗೆ ಬಳಸಲಾಗಿದ್ದ ಹೆಚ್ಚಿನ ವಾಹನಗಳನ್ನೆಲ್ಲ ದಂಗೆಕೋರರು ಸುಟ್ಟುಹಾಕಿದ್ದಾರೆ.