ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಹರ್ಷವರ್ಧನ್ ಜೈನ್ ವಿಚಾರಣೆ ತೀವ್ರಗೊಂಡಿದೆ. ಕೆಲವು ಶಾಕಿಂಗ್ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ.
ನಕಲಿ ರಾಯಭಾರ ಕಚೇರಿಯಲ್ಲಿ ಸುಮಾರು 300 ಕೋಟಿ ಹಗರಣ ನಡೆದಿದ್ದು, ಬಹು ವಿದೇಶಿ ಬ್ಯಾಂಕ್ ಖಾತೆಗಳ ಲಿಂಕ್ ಇರೋದು ಪತ್ತೆಯಾಗಿದೆ. ಆರೋಪಿ ಹರ್ಷವರ್ಧನ್ 162 ಬಾರಿ ಫಾರಿನ್ ಟ್ರಿಪ್ ಹೋಗಿಬಂದಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ.
ಯುಪಿ ಎಸ್ಟಿಎಫ್ ನಡೆಸಿದ ತನಿಖೆಯಲ್ಲಿ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಮತ್ತು ವಂಚಕ ಅಹ್ಸಾನ್ ಅಲಿ ಸಯೀದ್ಗೆ ಹರ್ಷವರ್ಧನ್ನನ್ನ ಪರಿಚಯಿಸಿದ್ದು ಚಂದ್ರಸ್ವಾಮಿ ಅಂತ ತಿಳಿದುಬಂದಿದೆ. ಹೈದರಾಬಾದ್ನಲ್ಲಿ ಜನಿಸಿದ್ದ ಸಯೀದ್ ಜೈನ್ ಈಗ ಟರ್ಕಿ ಪ್ರಜೆಯಾಗಿದ್ದಾರೆ. ಹರ್ಷವರ್ಧನ್ ಜೈನ್ ಸಯೀದ್ ಜೈನ್ ಜೊತೆ ಸೇರಿ 25 ನಕಲಿ ಕಂಪನಿಗಳನ್ನು ತೆರೆಯಲು ಕೆಲಸ ಮಾಡಿದ್ದ. ಈ ಹಾದಿಯಲ್ಲಿ 300 ಕೋಟಿ ಹಗರಣ ನಡೆದಿರುವುದು ಗಮನಕ್ಕೆ ಬಂದಿದೆ.
ಅಂತಾರಾಷ್ಟ್ರೀಯ ವಂಚಕ ಸಯೀದ್ ಸ್ವಿಟ್ಜರ್ಲ್ಯಾಂಡ್ನಲ್ಲಿ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಎಂಬ ಕಂಪನಿ ನಡೆಸುತ್ತಿದ್ದ. ಕೆಲ ಸಮಯದ ನಂತರ ಇದನ್ನ ಬ್ರೋಕರೇಜ್ ಕಂಪನಿ ಆಗಿ ಬದಲಾಯಿಸಲಾಗಿತ್ತು. ಈ ವೇಳೆ ಸಾಲ ಪಡೆಯುವವರಿಗೆ ಸಹಾಯ, ಮಾರ್ಗದರ್ಶನ ಮಾಡುವ ಭರವಸೆ ನೀಡಿ 25 ದಶಲಕ್ಷ ಪೌಂಡ್ (ಸುಮಾರು 300 ಕೋಟಿ ರೂ.) ಸಂಗ್ರಹ ಮಾಡಿದ್ದ. ಬಳಿಕ ಸ್ವಿಸ್ ನಿಂದ ಕಂಪನಿಯನ್ನೇ ಎತ್ತಂಗಡಿ ಮಾಡಿದ್ದ ಸಯೀದ್. ಈ ಪ್ರಕರಣ ಸಂಬಂಧ ಸಯೀದ್ ಜೈನ್ನನ್ನ 2022ರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜೈನ್ ನಕಲಿ ರಾಯಭಾರ ಕಚೇರಿ ನೆಟ್ವರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದನ್ನ ಯುಪಿ ಎಸ್ಟಿಎಫ್ ಅಧಿಕಾರಿಗಳು ಬಯಲಿಗೆಳೆದಿರುವುದಾಗಿ ವರದಿಗಳು ತಿಳಿಸಿವೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನಲ್ಲಿ ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್ನನ್ನ ಯುಪಿ ಎಸ್ಟಿಎಫ್ ಬಂಧಿಸಿತ್ತು. ದಾಳಿಯಲ್ಲಿ ಹಲವಾರು ನಕಲಿ ಅಂಚೆ ಚೀಟಿಗಳು, ಪಾಸ್ಪೋರ್ಟ್ಗಳು, ರಾಜತಾಂತ್ರಿಕ ನೋಂದಣಿ ಫಲಕಗಳು, ವಿದೇಶಿ ಮತ್ತು ದೇಶೀಯ ನಗದು ವಶಪಡಿಸಿಕೊಳ್ಳಲಾಗಿತ್ತು.