ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದ ಪ್ರಯಾಣಿಸುತ್ತಿದ್ದ ಕಾರೊಂದರ ಮೇಲೆ ಭೂಕುಸಿತವಾಗಿ ಐವರು ಯಾತ್ರಿಕರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡೆದಿದೆ. ಭೂಕುಸಿತದ ಅವಶೇಷಗಳಡಿಯಲ್ಲಿ ಕಾರು ಹೂತುಹೋದ ಪರಿಣಾಮ ಐವರು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿದರು.
ಚೌಕಿ ಫಾಟ್ ಬಳಿಯ ತರ್ಸಾಲಿಯಲ್ಲಿ ಗುಡ್ಡದಿಂದ ಭಾರೀ ಅವಶೇಷಗಳು ಬಿದ್ದು, ಹೆದ್ದಾರಿಯ 60 ಮೀಟರ್ ಭಾಗವು ಸಂಪೂರ್ಣ ಮುಚ್ಚಿ ಹೋಗಿದೆ. ಅವಶೇಷಗಳಡಿಯಲ್ಲಿ ಹೂತುಹೋಗಿದ್ದ ವಾಹನವನ್ನು ಹೊರತೆಗೆಯಲಾಗಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟವರಲ್ಲಿ ಒಬ್ಬರು ಗುಜರಾತ್ ನಿವಾಸಿಯಾಗಿದ್ದಾರೆ.
ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಗುಡ್ಡ ಕುಸಿತದ ಪರಿಣಾಮವಾಗಿ ಕೇದಾರನಾಥ ಧಾಮಕ್ಕೆ ಹೋಗುವ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿ ಬಂದ್ ಮಾಡಲಾಗಿದೆ. ತಗ್ಗು ಪ್ರದೇಶಗಳಾದ ಚೌಕಿ ಜವಾಡಿ, ಕೊತ್ವಾಲಿ ರುದ್ರಪ್ರಯಾಗ, ಚೌಕಿ ತಿಲವಾಡ, ಠಾಣಾ ಅಗಸ್ತ್ಯಮುನಿ, ಕಾಕಡಗಡ ಜನರು ಮತ್ತು ಪ್ರಯಾಣಿಕರು ಅಡಚಣೆ ಎದುರಿಸುತ್ತಿದ್ದಾರೆ ಎಂದು ರುದ್ರಪ್ರಯಾಗ ಪೊಲೀಸರು ತಿಳಿಸಿದ್ದಾರೆ.
ರುದ್ರಪ್ರಯಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಉತ್ತರಾಖಂಡದ ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ 11 ರಿಂದ ಆಗಸ್ಟ್ 14 ರವರೆಗೆ ‘ರೆಡ್’ ಅಲರ್ಟ್ ಮತ್ತು ‘ಆರೆಂಜ್’ ಅಲರ್ಟ್ ಘೋಷಿಸಿದೆ.