ಹೊಸದಿಂತ ವರದಿ,ಮೈಸೂರು:
ಮಹಿಷ ದಸರಾವನ್ನು ಅ.13 ರಂದು ಚಾಮುಂಡಿಬೆಟ್ಟದಲ್ಲಿ ಆಚರಿಸದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯಿಂದ ಇಡೀ ದಿನ ಕಾವಲು ಕಾಯುತ್ತೇವೆ ಎಂದು ಸಂಸದ ಪ್ರತಾಪ್ಸಿಂಹ ತಿಳಿಸಿದರು.
ಸೋಮವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಚಾಮುಂಡಿಬೆಟ್ಟ ಚಲೋ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಮಹಿಷ ದಸರಾ ಆಚರಣೆ ಮಾಡುವ ನೆಪದಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಅಪಮಾನಿಸುವ ಹುನ್ನಾರದ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಯಲು ಅ. 13ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಮಾಡುತ್ತೇವೆ. ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಹಿಷ ದಸರೆ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಮೈಸೂರಿನ ಕೆಲವರು ಮಹಿಷ ದಸರಾ ಎಂಬ ಆಚರಣೆ ಮಾಡುವ ಮೂಲಕ ನಾಡಿನ ಅಸ್ಮಿತೆ ತಾಯಿ ಚಾಮುಂಡೇಶ್ವರಿಯನ್ನು ದೆವ್ವವಾಗಿ ಬಿಂಬಿಸುವ ಕೆಲಸ ಮಾಡಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈಗ ಮತ್ತೆ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಮುಂದಾಗಿದ್ದಾರೆ. ಇದನ್ನು ಬುಡಸಮೇತ ಕಿತ್ತುಹಾಕಬೇಕಿದ್ದು, ಅದಕ್ಕಾಗಿ ಅ.13ರಂದು 5 ಸಾವಿರಕ್ಕೂ ಹೆಚ್ಚು ಮಂದಿ ಬೆಟ್ಟಕ್ಕೆ ತೆರಳಿ ದೇವಿದೆ ಪೂಜೆ ಸಲ್ಲಿಸುತ್ತಿದ್ದೇವೆ. ದೇವಿ ದರ್ಶನದ ಬಳಿಕ ಯಾವುದೇ ಅಪದ್ಧ ನಡೆಯದಂತೆ ಮಹಿಷನ ಪ್ರತಿಮೆ ಬಳಿ ಪಹರೆ ನಿಲ್ಲುತ್ತೇವೆ ಎಂದರು.