ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರುಗಳಿಗೆ (Passenger Cars) 6 ಏರ್ಬ್ಯಾಗ್ (6 Airbag) ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಹೇಳಿದ್ದಾರೆ.
ಪ್ರಯಾಣಿಕರ ಸುರಕ್ಷತೆಗಾಗಿ 2023ರ ಅಕ್ಟೋಬರ್ ನಿಂದ ಆರು ಏರ್ಬ್ಯಾಗ್ ಸುರಕ್ಷತಾ ಮಾನದಂಡವನ್ನು ಜಾರಿಗೆ ತರಲು ಸರ್ಕಾರ ಕಳೆದ ವರ್ಷ ಪ್ರಸ್ತಾಪಿಸಿತ್ತು.
ಆದ್ರೆ ಇಓದಿಗೇ ಕಾರುಗಳಿಗೆ ಆರು ಏರ್ಬ್ಯಾಗ್ ಗಳ ನಿಯಮವನ್ನು ಕಡ್ಡಾಯಗೊಳಿಸಲು ಬಯಸುವುದಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ACMA) ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪಾಲ್ಗೊಂಡು ಮಾತನಾಡಿದರು.
6 ಏರ್ಬ್ಯಾಗ್ ಆರ್ಥಿಕ ಮಾದರಿ ಏನೇ ಇರಲಿ, ಜನರು ಆ ಕಾರನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಹಾಗಾಗಿ, 6 ಏರ್ ಬ್ಯಾಗ್ ಅಳವಡಿಕೆಯು ಮಾರುಕಟ್ಟೆಗೆ ಬಿಟ್ಟಿದ್ದು, ಅವರೇ ನಿರ್ಧರಿಸಬೇಕು. ಸ್ಟಾರ್ ರೇಟಿಂಗ್, ಭಾರತ್ ಎನ್ಸಿಎಪಿ ಇದೆ. ಈ ಕುರಿತು ತಯಾರಕರು ಮತ್ತು ಜನರು ನಿರ್ಧರಿಸಬಹುದು. ನಾವು ಅದನ್ನು ಅವರಿಗೆ ಬಿಡುತ್ತೇವೆ ಎಂದು ಹೇಳಿದರು.
ಭಾರತದಲ್ಲಿಯೇ ಕಾರುಗಳ ಸುರಕ್ಷತೆಯನ್ನು ಅಳೆಯುವ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ಗೆ (Bharat New Car Assessment Programme or Bharat NCAP) ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಚಾಲನೆ ನೀಡಿದ್ದಾರೆ. ಇದರೊಂದಿಗೆ ಸ್ವಂತ ಎನ್ಸಿಪಿ ಹೊಂದಿದ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಭಾರತದ ರಸ್ತೆ ಸುರಕ್ಷತೆ ಹಾಗೂ ಕಾರುಗಳ ಅಪಘಾತ (Crash) ಸುರಕ್ಷತೆಯನ್ನು ಅಳೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ಭಾರತ್ ಎನ್ಸಿಎಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗರಿಷ್ಠ ಎಂಟು ಪ್ಯಾಸೆಂಜರ್ಗಳು ಕುಳಿತುಕೊಳ್ಳಬಹುದಾದ ಅಥವಾ ಗರಿಷ್ಠ 3.5 ಟನ್ ತೂಕದ ಕಾರುಗಳ ಸುರಕ್ಷತೆಯ ಸಾಮರ್ಥ್ಯವನ್ನು ಅಳೆಯುತ್ತದೆ. ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಭಾರತ್ ಎನ್ಸಿಎಪಿಯನ್ನು ಜಾರಿಗೆ ತರಲಾಗಿದೆ. ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಕಾರಿನ ಮುಂಭಾಗ (Frontal), ಬದಿ (Side), ಪೋಲ್ ಸೈಡ್ನಲ್ಲಿ ಕ್ರ್ಯಾಶ್ ಮಾಡಿಸಿ, ದಕ್ಷತೆ ಆಧಾರದ ಮೇಲೆ ರೇಟಿಂಗ್ ನೀಡಲಾಗುತ್ತದೆ.
ಆನ್ಲೈನ್ನಲ್ಲಿ ಮೊಬೈಲ್ ಸೇರಿ ಯಾವುದೇ ಉತ್ಪನ್ನಗಳ ರೇಟಿಂಗ್ ಆಧಾರದ ಮೇಲೆ ಖರೀದಿಸುವ ರೀತಿಯಲ್ಲಿಯೇ ಭಾರತ್ ಎನ್ಸಿಎಪಿ ನೀಡುವ ರೇಟಿಂಗ್ ಆಧಾರದ ಮೇಲೆಯೇ ಕಾರುಗಳನ್ನು ಖರೀದಿಸಲು ಜನರಿಗೆ ಅನುಕೂಲವಾಗಲಿದೆ. ಗರಿಷ್ಠ 5 ಸ್ಟಾರ್ಗಳವರೆಗೆ ಭಾರತ್ ಎನ್ಸಿಎಪಿಯು ರೇಟಿಂಗ್ ನೀಡಲಿದೆ. ಈ ಸುರಕ್ಷತಾ ರೇಟಿಂಗ್ಅನ್ನು ಗಮನಿಸಿಯೇ ಜನ ಕಾರುಗಳನ್ನು ಖರೀದಿಸಬಹುದಾಗಿದೆ.ದೇಶದಲ್ಲಿ ರೋಡ್ ಟ್ರಾಫಿಕ್ನಿಂದ ಸಂಭವಿಸುವ ಅಪಘಾತಗಳಲ್ಲಿ ವಾರ್ಷಿಕ 13 ಲಕ್ಷ ಜನ ಮೃತಪಡುತ್ತಾರೆ. ಹೀಗೆ ರಸ್ತೆ ಹಾಗೂ ಕಾರುಗಳ ಸುರಕ್ಷತೆಯ ಮೂಲಕ ಅಪಘಾತ ಪ್ರಮಾಣವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಭಾರತ್ ಎನ್ಸಿಎಪಿಯನ್ನು ಜಾರಿಗೆ ತಂದಿದೆ.