ದಾಖಲೆ ಇಲ್ಲದೆ ಸಾಗಿಸುತ್ತಿದ್ದ 60 ಲಕ್ಷ ರೂ. ಪೊಲೀಸರ ವಶ

ಹೊಸದಿಗಂತ ವರದಿ ಕೊಪ್ಪಳ:

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಣೆ, ಮದ್ಯ ಮಾರಾಟ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ‌‌‌ ಮೇಲೆ ಜಿಲ್ಲಾ ಪೊಲೀಸ್ ಇಲಾಖೆಯು ತೀವ್ರ ನಿಗಾ ಇಟ್ಟಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರ ನೇತೃತ್ವದಲ್ಲಿ ಪೊಲೀಸ್‌ ಇಲಾಖೆಯ ಇನ್ನಿತರ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯು ಭಾರತ‌ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಕಾರ್ಯಪ್ರವೃತ್ತರಾಗಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಾಗ ಕೆಎ-37ಎನ್-4323 ನಂಬರ್ ಹೊಂದಿದ ಕಾರು ಕೊಪ್ಪಳ ಕಡೆಯಿಂದ ಗಂಗಾವತಿ ಕಡೆಗೆ ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರ ಮಾರ್ಗದರ್ಶನದಲ್ಲಿ ಮಾರ್ಚ 24 ರಂದು ರಾತ್ರಿ 8.30ರ ವೇಳೆಗೆ ಬಸಾಪಟ್ಟಣದ ಹತ್ತಿರ ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಕಾರಿನಲ್ಲಿ 500 ರೂ. ಮುಖಬೆಲೆಯ 60 ಲಕ್ಷ ರೂ.ಗಳ ಹಣ ಇರುವುದು ಪತ್ತೆಯಾಗಿದೆ.

ಈ ಹಣದ ಬಗ್ಗೆ ಕಾರಿನಲ್ಲಿದ್ದ ಗಂಗಾವತಿ ತಾಲೂಕಿನ ವೆಂಕಟೇಶ ಸಿಂಗನಾಳ, ವೀರಭದ್ರಪ್ಪ ಪಲ್ಲೇದ, ವಿರುಪಾಕ್ಷಗೌಡ ಪಾಟೀಲ್‌ ಹಾಗೂ ಕಾರು ಚಾಲಕ ಅಬ್ದುಲ್ ರಜಾಕ್ ವಿಚಾರಿಸಿ
ದಾಖಲೆಗಳನ್ನು ಕೇಳಿದಾಗ ಅವರು ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯ ಸಿಪಿಐ ಮಂಜುನಾಥ ಎಸ್ ಶೀಲವೇರಿ ಅವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಣದ ಮೂಲ ಪರಿಶೀಲಿಸುವ ಸಲುವಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಎಸ್ಪಿ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!