ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರಕ್ಕೆ ಬರ, ಪ್ರಕೃತಿ ವಿಕೋಪಗಳನ್ನು ಎದುರಿಸಲು ಮುಂಚಿತವಾಗಿಯೇ ಎಸ್ಡಿಆರ್ಎಫ್ ಅಡಿ 697 ಕೋಟಿ ರೂ. ಕೊಡಲಾಗಿದೆ. ಅದರಲ್ಲೇ ಬರಕ್ಕೂ ಹಣ ವಿನಿಯೋಗ ಮಾಡಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು,ಇಡೀ ದೇಶದಲ್ಲಿ ಒಟ್ಟು 12 ರಾಜ್ಯಗಳಲ್ಲಿ ಪ್ರಕೃತಿ ವಿಕೋಪ ಉಂಟಾಗಿದೆ. ಅದರಲ್ಲಿ ಕರ್ನಾಟಕದಲ್ಲಿಯೂ ಬರ ಕಾಣಿಸಿಕೊಂಡಿದ್ದು, ಅದಕ್ಕೆ 697 ಕೋಟಿ ರೂ. ಕೇಂದ್ರ ಸರ್ಕಾರದ ಪಾಲನ್ನು ಬಿಡುಗಡೆ ಮಾಡಲಾಗಿದೆ. ಬರಕ್ಕೆ ಕೇಂದ್ರ ಹಣ ಕೊಟ್ಟಿಲ್ಲ ಅಂತಾರೆ, ಆದ್ರೆ ಈಗಾಗಲೇ ಎಸ್ಡಿಆರ್ಎಫ್ನ ಅಡಿ 929 ಕೋಟಿ ರೂ. ಅನುದಾನವಿದೆ ಎಂದು ಹೇಳಿದರು.
ಇನ್ನು ರಾಜ್ಯ ಸರ್ಕಾರದಿಂದ ತಡವಾಗಿ ಸಲ್ಲಿಕೆ ಮಾಡಿರುವ ಈಗಿನ ಪ್ರಸ್ತಾವನೆಗೂ ಪರಿಹಾರ ಬರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರ ಪರಿಹಾರ ವಿಳಂಬ ಮಾಡಲ್ಲ. ಈಗಾಗಲೇ ತೆರಿಗೆ ಹಂಚಿಕೆ ಕಳೆದ ಮಾರ್ಚ್ ವರೆಗೆ ಪೂರ್ಣ ಕೊಡಲಾಗಿದೆ. ನಾಲ್ಕು ಪಟ್ಟು ಹೆಚ್ಚು ಕೊಡಲಾಗಿದೆ. 15ನೇ ಹಣಕಾಸು ಆಯೋಗ ತನ್ನ ಮಧ್ಯಂತರ ವರದಿಯಲ್ಲಿ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಅಂತ ಶಿಫಾರಸ್ಸು ಮಾಡಿದ್ದು ಹೌದು. ಆದರೆ, ಅಂತಿಮ ವರದಿಯಲ್ಲಿ ಆ ಶಿಫಾರಸು ಇರಲಿಲ್ಲ. ಹಾಗಾಗಿ ಆ ವಿಶೇಷ ಅನುದಾನ ಕರ್ನಾಟಕಕ್ಕೆ ಕೊಡುವ ಪ್ರಶ್ನೆಯೇ ಬರಲ್ಲ ಎಂದು ಹೇಳಿದರು.
ಇನ್ನು ಸಿಎಂ ಸಿದ್ದರಾಮಯ್ಯ ಮತ್ತೊಂದು ಕಡೆಗೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು 6,000 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಅಂತಾರೆ. ಆದರೆ, ಅದು ಸುಳ್ಳು. ಹಣಕಾಸು ಆಯೋಗ ಹೇಳದೇ ಹೋದರೂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 8,035.09 ಕೋಟಿ ಬಡ್ಡಿರಹಿತ ಸಾಲ ಕೊಡಲಾಗಿದೆ. ಇದನ್ನ ಕಾಂಗ್ರೆಸ್ನವರು ಎಲ್ಲಿಯೂ ಯಾಕೆ ಮಾಡನಾಡುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.