ಹೊಸದಿಗಂತ ವರದಿ ಮಡಿಕೇರಿ:
ರಾಜ್ಯ ಸರ್ಕಾರದಿಂದ ನೀಡಲಾಗುವ ವಾಲ್ಮೀಕಿ ಪ್ರಶಸ್ತಿಗೆ ಈ ಬಾರಿ ಕೊಡಗಿನ ಜೆ.ಕೆ ಮುತ್ತಮ್ಮ ಅವರು ಭಾಜನರಾಗಿದ್ದಾರೆ. ಕೊಡಗಿನ ಸಿದ್ದಾಪುರ ಸಮೀಪದ ದಿಡ್ಡಳ್ಳಿಯ ಸೂರಿಲ್ಲದ ಗಿರಿಜನರಿಗೆ ಸೂರು ಕೊಡಿಸುವ ನಿಟ್ಟಿನಲ್ಲಿ ಈ ಹಿಂದೆ ಮುತ್ತಮ್ಮ ಅವರು ತೀವ್ರ ಸ್ವರೂಪದ ಹೋರಾಟವನ್ನು ಮಾಡಿದ್ದರು.
ಇವರ ಹೋರಾಟಕ್ಕೆ ಮಣಿದು ಅಂದಿನ ಸರಕಾರ, ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭಿಸಿ ನಿರಾಶ್ರಿತರಿಗೆ ಸಂಪೂರ್ಣ ಸವಲತ್ತು ಇರುವ ನಿವೇಶನ ಹಾಗೂ ಮನೆಯನ್ನು ನಿರ್ಮಿಸಿ ಕೊಟ್ಟಿತ್ತು.
ಜೆ.ಕೆ ಮುತ್ತಮ್ಮ ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು, ದುರ್ಬಲ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ. ಇವರ ಸಂಘಟನಾ ಚಾತುರ್ಯಕ್ಕಾಗಿ ಈ ಬಾರಿ ಇವರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.