ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಟೀಕೆಗಳಿಗೆ ಕರ್ನಾಟಕದ ಸಚಿವ ರಾಮಲಿಂಗಾರೆಡ್ಡಿ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ. “ನಾವು ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ” ಎಂದು ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಜಲಾಶಯಗಳ ಇಂದಿನ ವಾಸ್ತವ ಸ್ಥಿತಿ
ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿಗಳಲ್ಲಿ ಸದ್ಯ ನೀರಿನ ಒಳಹರಿವು ತೀರಾ ಕುಸಿದಿದೆ. 2026ರ ಜೂನ್ ಅಂತ್ಯದ ವೇಳೆಗೆ ಈ ನಾಲ್ಕು ಜಲಾಶಯಗಳಲ್ಲಿ ಕೇವಲ 15.761 ಟಿಎಂಸಿ ಮಾತ್ರ ಬಳಕೆಯಾಗುವಂತಹ ನೀರಿದೆ. ಈ ಸಂಗ್ರಹವು ಮುಂದಿನ ಮೂರು ತಿಂಗಳ ಕಾಲ ಕರ್ನಾಟಕದ ಜನತೆಗೆ ಕುಡಿಯುವ ನೀರು ಪೂರೈಸಲು ಕೂಡ ಸಾಕಾಗುವುದಿಲ್ಲ. ಕೇವಲ 4.05 ಟಿಎಂಸಿ ನೀರು ಮಾತ್ರ ಜೂನ್ ಕೊನೆಯ ವಾರದಲ್ಲಿ ಹರಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಿರ್ಧಾರ ಕೈಗೊಳ್ಳುವುದು ಪ್ರಾಧಿಕಾರ ಮಾತ್ರ!
“ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮತ್ತು ಜಲ ನಿರ್ವಹಣಾ ಪ್ರಾಧಿಕಾರ ಮಾತ್ರ ನೀರು ಬಿಡುಗಡೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿವೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ.” – ರಾಮಲಿಂಗಾರೆಡ್ಡಿ, ಸಚಿವರು
ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಪ್ರಮುಖ ನಗರಗಳ ಕುಡಿಯುವ ನೀರಿನ ಹಿತದೃಷ್ಟಿಯಿಂದ ಜಲಾಶಯಗಳ ನೀರನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕವು ಪ್ರಾಧಿಕಾರದ ಸಭೆಗಳಲ್ಲಿ ತನ್ನ ಬಲವಾದ ವಾದವನ್ನು ಮಂಡಿಸಿದೆ. ಇದನ್ನು ಪರಿಗಣಿಸಿಯೇ CWMA ಸೂಕ್ತ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಸಚಿವರು ನೆನಪಿಸಿದ್ದಾರೆ.



