ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿಯಲು ಹಣ ನೀಡದ ಚಿಕ್ಕ ಜಗಳವೇ ಲಿವಿಂಗ್ ಟುಗೇದರ್ನಲ್ಲಿದ್ದ ಪ್ರೇಮಿಗಳ ಜೀವ ಕಸಿದುಕೊಂಡ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಒಡಿಶಾ ಮೂಲದ ಸೀಮಾ ನಾಯಕ್ (25) ಹಾಗೂ ರಾಕೇಶ್ ಪಾತ್ರ (23) ಎಂದು ಗುರುತಿಸಲಾಗಿದೆ. ಇಬ್ಬರೂ ಲಿವ್ಇನ್ ರಿಲೇಶನ್ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಎರಡು ದಿನಗಳಿಂದ ಅವರ ಮನೆಯಲ್ಲಿ ಯಾವುದೇ ಚಲನವಲನ ಕಂಡುಬರದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ಕಿಟಕಿ ಒಡೆದು ನೋಡಿದಾಗ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾಕೇಶ್ ಕುಡಿತದ ಅಭ್ಯಾಸ ಹೊಂದಿದ್ದವನಾಗಿದ್ದು, ಹಣಕ್ಕಾಗಿ ಪದೇಪದೇ ಸೀಮಾ ಜೊತೆ ವಾಗ್ವಾದ ಮಾಡುತ್ತಿದ್ದ. ಕಳೆದ ಭಾನುವಾರವೂ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ಸೀಮಾ ಹಣ ನೀಡದೆ ಮಲಗಿದ್ದರೆ, ಕುಡಿಯಲು ಹಣ ಸಿಗದೆ ಖಿನ್ನಗೊಂಡ ರಾಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ಎದ್ದ ಸೀಮಾ ಗೆಳೆಯ ಮೃತ ಸ್ಥಿತಿಯಲ್ಲಿ ಕಂಡು, ಆಘಾತದಿಂದ ತಾನೂ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದ್ದು, ಆನೇಕಲ್ ಉಪವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.