ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಾಗೂ ಛತ್ ಪೂಜೆ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ 12 ಸಾವಿರಕ್ಕೂ ಹೆಚ್ಚು ವಿಶೇಷ ರೈಲುಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಹೇಳಿದ್ದಾರೆ.
ಈ ಪೈಕಿ 164 ವಿಶೇಷ ರೈಲುಗಳ ಸಂಚಾರ ಕಲ್ಪಿಸಲಾಗಿದ್ದು, ಈ ರೈಲುಗಳು 482 ಟ್ರಿಪ್ ಗಳಲ್ಲಿ ಸಂಚರಿಸಲಿವೆ. ಇದರಲ್ಲಿ 124 ವಿಶೇಷ ರೈಲುಗಳು ನೈರುತ್ಯ ರೈಲ್ವೆ ವಲಯದಿಂದಲೇ ಸಂಚಾರ ಆರಂಭಿಸಲಿವೆ ಎಂದು ತಿಳಿಸಿದರು.
ವಿಶೇಷವಾಗಿ ಬಲಿಪಾಂಡ್ಯಮಿ ದಿನವಾದ ಇಂದು ಕರ್ನಾಟಕದಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ 10 ವಿಶೇಷ ರೈಲುಗಳನ್ನು ನೈರುತ್ಯ ವಲಯದಿಂದ ಕಲ್ಪಿಸಲಾಗಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ಹುಬ್ಬಳ್ಳಿ, ಮತ್ತಿತರ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಮಾತ್ರವಲ್ಲದೆ, ದೇಶದ ಇತರ ಕಡೆಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗಾಗಿ ಇತರೆ ರೈಲ್ವೆ ವಲಯಗಳಿಂದ 40 ವಿಶೇಷ ರೈಲುಗಳ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ದೀಪಾವಳ ಮತ್ತು ಛತ್ ಪೂಜೆ ಸಂದರ್ಭದಲ್ಲಿ ಸಂಭ್ರಮ ಸಡಗರದಿಂದ ಹಬ್ಬಗಳನ್ನು ಆಚರಿಸಲು ಅನುಕೂಲ ಮಾಡಿಕೊಡುವುದು ಇಲಾಖೆಯ ಉದ್ದೇಶವಾಗಿದೆ ಎಂದರು. ದಕ್ಷಿಣ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ ಪ್ರಯಾಣಿಕರು ಸಂಚರಿಸಲು ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ 10 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಲಿದೆ. ಅದೇ ರೀತಿ ದೈನಂದಿನ ರೈಲುಗಳ ಸಂಚಾರದಲ್ಲಿ 9 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಲಿದ್ದು, ಇದರಿಂದ 64 ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹವಾಗಲಿದೆ ಎಂದು ತಿಳಿಸಿದರು.
ಎಲ್ಲೆಡೆ ದೀಪಾವಳಿ, ಛತ್ ಪೂಜೆ ಸಂಭ್ರಮ: ಜನತೆಯ ಅನುಕೂಲಕ್ಕೆ 12 ಸಾವಿರಕ್ಕೂ ಹೆಚ್ಚು ವಿಶೇಷ ರೈಲುಗಳ ಓಡಾಟ

