Sunday, October 26, 2025

KKR ತಂಡದಲ್ಲಿ ಮೇಜರ್ ಸರ್ಜರಿ: ಕೋಚ್ ಸ್ಥಾನದಿಂದ ಚಂದ್ರಕಾಂತ್ ಪಂಡಿತ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-19ಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿ ತಂಡದಲ್ಲಿ ಭಾರೀ ಬದಲಾವಣೆಗಳಿಗೆ ವೇದಿಕೆ ಸಿದ್ಧವಾಗಿದೆ. ತಂಡದ ನಿರ್ವಹಣಾ ಮಂಡಳಿ “ಮೇಜರ್ ಸರ್ಜರಿ” ಮಾಡಲು ಮುಂದಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಈಗಾಗಲೇ ತಂಡದ ಮುಖ್ಯ ಕೋಚ್ ಬದಲಾವಣೆಯ ನಿರ್ಧಾರ ಕೈಗೊಳ್ಳಲಾಗಿದೆ.

KKR ತಂಡದ ಕೋಚ್ ಸ್ಥಾನದಿಂದ ಚಂದ್ರಕಾಂತ್ ಪಂಡಿತ್ ಕೆಳಗಿಳಿದಿದ್ದು, ಅವರ ಸ್ಥಾನವನ್ನು ಈಗ ಅಭಿಷೇಕ್ ನಾಯರ್ ಅಲಂಕರಿಸಲಿದ್ದಾರೆ. ಈ ಹಿಂದೆ ನಾಯರ್ ಕೆಕೆಆರ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ತಂಡದ ಒಳಗಿನ ಬೆಳವಣಿಗೆಗಳ ಪ್ರಕಾರ, ಪಂಡಿತ್ ಅವರ ಆಡಳಿತ ಶೈಲಿ ಹಾಗೂ ಕಳೆದ ಸೀಸನ್‌ನ ಪ್ರದರ್ಶನದ ಬಳಿಕ ನಿರ್ವಹಣಾ ಮಂಡಳಿ ಹೊಸ ದೃಷ್ಟಿಕೋಣದ ಅಗತ್ಯವಿದೆ ಎಂದು ತೀರ್ಮಾನಿಸಿದೆ.

ಗೌತಮ್ ಗಂಭೀರ್ ಟೀಮ್ ಇಂಡಿಯಾದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಅಭಿಷೇಕ್ ನಾಯರ್ ಭಾರತೀಯ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾಣಿಸಿಕೊಂಡಿದ್ದರು. ಆದರೆ ಕಳೆದ ವರ್ಷ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ಅವರು ಮತ್ತೆ ಐಪಿಎಲ್ ಮಧ್ಯಭಾಗದಲ್ಲಿ ಕೆಕೆಆರ್ ತಂಡಕ್ಕೆ ಮರಳಿದರು. ಆದರೆ ಕಳೆದ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು.

ಈಗ ಪಂಡಿತ್ ಅವರ ನಿವೃತ್ತಿಯ ಬೆನ್ನಲ್ಲೇ ಅಭಿಷೇಕ್ ನಾಯರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ನಾಯರ್ ಅವರ ನೇಮಕದಿಂದ ಕೆಕೆಆರ್ ತಂಡದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಬಹುದು ಎಂಬ ಮಾತುಗಳು ಈಗಲೇ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.

error: Content is protected !!