ದಿಗಂತ ವರದಿ ಕಾಸರಗೋಡು:
ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಓರ್ವನಿಗೆ ಒಮಿಕ್ರಾನ್ ಬಾಧಿಸಿರುವುದು ದೃಢಗೊಂಡಿದೆ. ಜಿಲ್ಲೆಯ ಮಧೂರು ನಿವಾಸಿಯಾದ 50ರ ಹರೆಯದ ವ್ಯಕ್ತಿಗೆ ರೋಗ ತಗುಲಿದೆ. ಈ ವ್ಯಕ್ತಿ ಸಂದರ್ಶನ ವೀಸಾದಲ್ಲಿ ಡಿಸೆಂಬರ್ 22ರಂದು ದುಬಾಯಿಗೆ ತೆರಳಿದ್ದು , 29ರಂದು ಊರಿಗೆ ಬಂದಿದ್ದರು.
ಈ ವೇಳೆ ನಡೆದ ಆರ್ ಟಿಪಿಸಿಆರ್ ತಪಾಸಣೆಯಲ್ಲಿ ಪಾಸಿಟಿವ್ ಆಗಿರುವುದು ಕಂಡುಬಂದಿದೆ. ಆದ್ದರಿಂದ ಸ್ಯಾಂಪಲ್ ಒಮಿಕ್ರಾನ್ ತಪಾಸಣೆಗೆ ಕಳುಹಿಸಲಾಗಿತ್ತು. ಈ ವ್ಯಕ್ತಿಯನ್ನು ಕಾಸರಗೋಡು ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಲ್ಲದೆ ಈ ವ್ಯಕ್ತಿಯ ಪತ್ನಿ ಮತ್ತು ಮಕ್ಕಳ ಮೇಲೆ ನಿಗಾ ವಹಿಸಲಾಗಿದೆ.
ಇದೇ ವೇಳೆ ಜಿಲ್ಲೆಯಲ್ಲಿ ಒಮಿಕ್ರಾನ್ ವೈರಾಣು ದೃಢಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಪ್ರತಿರೋಧ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯವಸ್ಥೆ ಏರ್ಪಡಿಸಲಾಗಿದೆ.