ದಿಗಂತ ವರದಿ ಮಂಡ್ಯ :
ಭಾರತ ವಿಶ್ವಗುರುವಾಗುವುದರಲ್ಲಿ ಯುವಕರ ಪಾತ್ರ ದೊಡ್ಡದು. ಹಿಂದೆಯೂ ವಿಶ್ವಗುರುವಾಗಿತ್ತು. ಮುಂದೆಯೂ ಆಗಲಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ಮಂಗಳವಾರ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವಿವೇಕಾನಂದರ ನಂತರ ಯುವ ಸಬಲೀಕರಣವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರ.
ರಾಷ್ಟ್ರವನ್ನು ಉನ್ನತೀಕರಣಕ್ಕೆ ಕರೆದೊಯ್ಯಲು ಯುವಕರ ಅವಶ್ಯಕತೆ ಇದೆ. ಈ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದಾರೆ. ಯುವಶಕ್ತಿಯನ್ನು ಸದ್ಭಳಕೆ ಮಾಡಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ದೃಢವಾಗಿ ತಿಳಿಸಿದರು.
ಭಾರತವನ್ನು ಸರ್ವಾಂಗೀಣವಾಗಿ ನಿರ್ಮಾಣ ಮಾಡುವುದು, ದೇಶದಲ್ಲಿ ಯುವಶಕ್ತಿಯನ್ನು ಸದೃಢಗೊಳಿಸುವುದು ಯುವಜನೋತ್ಸವದ ಮೂಲ ಉದ್ದೇಶವಾಗಿದೆ. ರಾಷ್ಟ್ರದಲ್ಲಿ ಪರಿವರ್ತನೆ, ಬಲವರ್ಧನೆ ಮತ್ತು ವಿಶ್ವಮಟ್ಟದಲ್ಲಿ ಭಾರತವನ್ನು ಗುರುತಿಸಲು ಯುವಜನರ ಅವಶ್ಯಕತೆ ಇದೆ. ದೇಶದಲ್ಲಿ ಕೈಗೊಂಡಿರುವ ಆತ್ಮನಿರ್ಭರ್ಯೋಜನೆಯಲ್ಲಿ ಯುವಕರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳಿವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದೇಶ ಸದೃಢವಾಗಿ ಬೆಳೆಯಲಿದೆ. ಯುವಜನರು ಮಾನಸಿಕ ಮತ್ತು ದೈಹಿಕವಾಗಿ ಬೆಳೆಯಲಿದ್ದಾರೆ. ಈ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ. ಯುವಜನರಿಗೆ ಆ ಸಾಮರ್ಥ್ಯವೂ ಇದೆ. ನದಿಗಳು ಮಾರ್ಗ ಬದಲಾಯಿಸಬಹುದು. ಆದರೆ, ಯುವಕರ ದೃಷ್ಟಿಕೋನ ಎಂದಿಗೂ ಬದಲಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.