ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನಾದರೂ ಬೇಕು ಎಂದರೆ ದೇವರ ಮೊರೆ ಹೋಗುವುದು ಸಾಮಾನ್ಯ. ನಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿಯೂ ಫಲ ಕಾಣದೇ ಇದ್ದಾಗ ಕಡೆಯ ಭರವಸೆ ಪರಮಾತ್ಮನೊಬ್ಬನೆ.
ಉತ್ತರಪ್ರದೇಶದ ಬಂಡಾದಲ್ಲಿ ವಿಶಿಷ್ಟವಾದ ಜಾತ್ರೆಯೊಂದು ನಡೆಯುತ್ತದೆ. ಇದನ್ನು ಪ್ರೇಮಿಗಳ ಜಾತ್ರೆ ಎನ್ನುತ್ತಾರೆ. ಪ್ರೇಮಿಗಳು ಈ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಇನ್ನು ಪ್ರೇಮಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಈ ಜಾತ್ರೆಗೆ ಬಂದು ದೇವರಲ್ಲಿ ಬೇಡಿದರೆ ಅದು ಕಾರ್ಯಸಿದ್ಧಿಯಾಗುತ್ತದೆ ಎನ್ನುವುದು ಜನರ ನಂಬಿಕೆ.
ಕೆನ್ ನದಿ ದಡದಲ್ಲಿರುವ ಭೂರಗಢ್ ಕೋಟೆಯಲ್ಲಿ ಎರಡು ದಿನ ಜಾತ್ರೆ ನಡೆಯುತ್ತದೆ. ಇಲ್ಲಿ ನಟಾಬಲಿ ಬಾಬಾ ದೇವಾಲಯ ಇದೆ. ಈ ದೇವರಿಗೆ ಪ್ರೇಮಿಗಳು ಹರಕೆ ಹೊರುತ್ತಾರೆ. ಇಲ್ಲಿ ಬಂದು ಬೇಡಿಕೊಂಡು ಹೋದರೆ ಇಷ್ಟಾರ್ಥ ಈಡೇರುವ ನಂಬಿಕೆ ಭಕ್ತರದ್ದು.
ಸುಮಾರು 600ವರ್ಷದ ಹಿಂದೆ ಈ ಪ್ರದೇಶದಲ್ಲಿ ಒಬ್ಬ ರಾಜನಿದ್ದ. ಈತನ ಬಳಿ ಹಲವಾರು ಸೈನಿಕರಿದ್ದರು. ಅದರಲ್ಲಿ ಬೇರೆ ಜಾತಿಯ ಸೈನಿಕನೊಬ್ಬನಿದ್ದ. ಆತನಿಗೆ ರಾಜನ ಮಗಳ ಮೇಲೆ ಪ್ರೀತಿಯಾಗಿತ್ತು. ಯುವರಾಣಿಗೂ ಈತ ಇಷ್ಟವಾಗಿದ್ದ. ಈತನನ್ನೇ ವರಿಸುವುದಾಗಿ ಯುವರಾಣಿ ಹೇಳಿದ್ದರು. ಇದಕ್ಕೆ ಒಪ್ಪಿದ ರಾಜ ಒಂದು ಷರತ್ತು ವಿಧಿಸಿದ್ದ. ಸೇವಕ ಸಮೀಪದ ಪರ್ವತದಿಂದ ಹತ್ತಿಯ ಹಗ್ಗ ಬಳಸಿ ಕೋಟೆಗೆ ಬರಬೇಕು ಎಂದಿದ್ದ. ಅಂತೆಯೇ ಸೈನಿಕ ಇನ್ನೇನು ಕೋಟೆ ಹತ್ತಿರ ಇದ್ದಾಗ, ರಾಜ ಹತ್ತಿಯ ಹಗ್ಗವನ್ನು ಕತ್ತರಿಸಿದ್ದ. ಸೈನಿಕ ಕೆಳಗೆ ಬಿದ್ದು ಪ್ರಾಣ ಬಿಟ್ಟ. ಇದನ್ನು ಕಣ್ಣಾರೆ ಕಂಡ ಯುವರಾಣಿಯೂ ಕೋಟೆಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇವರಿಬ್ಬರೂ ಅಮರರಾದ ದಿನದಿಂದ ಈ ಜಾತ್ರೆ ಆರಂಭವಾಗಿದೆ ಎನ್ನಲಾಗಿದೆ.