ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಈ ಬಾರಿಯ ಗಣರಾಜ್ಯೋತ್ಸವಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ದಚಿತ್ರ ಕರ್ನಾಟಕದ್ದಾಗಿದೆ. 13ನೇ ಬಾರಿಗೆ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗಿಯಾಗುವ ಕರ್ನಾಟಕದ ಸ್ತಬ್ಧಚಿತ್ರ ಹೇಗಿದೆ ನೋಡಿ..
ಈ ಬಾರಿ ಕರ್ನಾಟಕದಿಂದ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯದ ಸ್ಥಬ್ದಚಿತ್ರ ಇದಾಗಿದೆ.
ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಆನೆಯ ಕಲಾಕೃತಿ ಜತೆಗೆ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ.
ಮಧ್ಯದಲ್ಲಿ ಸುಂದರವಾದ ಬಿದರಿನ ಕಲೆಯ ಹೂಜಿ, ಲೋಹದ ಕಲಾಕೃತಿಯಲ್ಲಿ ಮೂಡಿಬಂದ ಕರಾವಳಿ ವೃಶಿಷ್ಟ್ಯವನ್ನು ಪ್ರದರ್ಶಿಸುವ ಭೂತಾರಾಧನೆಯ ಮುಖವಾಡ, ಗಂಜೀಫಾ ಕಲಾಕೃತಿ, ಬಿದರಿನಲ್ಲಿ ಸಿದ್ದಪಡಿಸಿರುವ ನವಿಲುಗಳಿವೆ.
ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೂಡಿಬಂದಿರುವ ಆಂಜನೇಯ ಸ್ವಾಮಿಯ ಮೂರ್ತಿ, ಇದರ ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಆಟಿಕೆಗಳು, ಶ್ರೀಗಂಧದ ಮಣ್ಣಿನ ಕಲಾಕೃತಿಗಳು ಕಣ್ಮನ ಸೆಳೆಯುವಂತಿದೆ.
ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಯನ್ನು ಬಿಂಬಿಸುವ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪ್ರತಿಮೆ. ಇವರ ಜತೆಗೆ ಗಂಧದ ಪೆಟ್ಟಿಗೆ, ನವಿಲಿನಾಕಾರದ ದೀಪದ ಕಳಶ, ಸಂಡೂರಿನ ಬಾಳೆ ನಾರಿನ ಚೀಲಗಳು, ಕರ್ನಾಟಕದ ಕೈಮಗ್ಗದ ಹಿರಿಮೆಯ ಇಳಕಲ್ ಕಸೂತಿ ಸೀರೆ, ಮೈಸೂರು ರೇಷ್ಮೆ ಸೀರೆ, ಕಿನ್ನಾಳ ಕಲೆಯಲ್ಲಿ ತಯಾರಿಸಿದ ಬಾಲೆಯರ ಕಲಾಕೃತಿಗಳು ಸ್ತಬ್ಧಚಿತ್ರದಲ್ಲಿ ಕೇಂದ್ರ ಬಿಂದುವಾಗಿರಲಿವೆ.