ಹೊಸದಿಗಂತ ವರದಿ,ಗದಗ:
ಕಾಂಗ್ರೆಸ್ ದುರಾಡಳಿತಕ್ಕೆ ಬೆಸತ್ತು ಜನತೆ ಬಿಜೆಪಿಗೆ ಬಹುಮತ ನೀಡಿದ್ದಾರೆ. ಆಡಳಿತಕ್ಕೆ ಬರಬೇಕು ಎನ್ನುವುದು ಎಲ್ಲರಿಗೂ ಅಸೆ ಇರುತ್ತದೆ. ಆದರೆ, ಜನಾದೇಶಕ್ಕೆ ಶಿರಬಾಗಬೇಕು ವಿನಃ ವ್ಯತಿರಿಕ್ತ ಪ್ರಯತ್ನಗಳನ್ನು ಮಾಡಬಾರದು. ಕಾಂಗ್ರೆಸ್ ನಾಯಕರ ಚಾರಿತ್ರ್ಯ ಎಂತಹದು ಎಂದು ಶಾಸಕ ಎಚ್.ಕೆ.ಪಾಟೀಲ ಅವರು ತೋರಿಸಿಕೊಟ್ಟಿದ್ದಾರೆ ಎಂದು ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ನಗರಸಭೆಯ ಸಭಾಭವನದಲ್ಲಿ ಸೋಮವಾರ ಜರುಗಿದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಸಾಧಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು ನಡೆಸಿದ ಕುತಂತ್ರಗಳು ಯಾವುದೇ ಪಕ್ಷಕ್ಕೆ ಶೋಭೆ ತರುವಂತಹದಲ್ಲ, ಯಾರದೋ ಮನೆಗೆ ನೇಮ್ಪ್ಲೆಟ್ ಬರೆಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಪ್ರಯತ್ನ ಸರಿಯಲ್ಲ ಇದು ಗದುಗಿನ ಇತಿಹಾಸದಲ್ಲಿಯೂ ನಡೆದಿಲ್ಲ, ಬುದ್ದಿಜೀವಿಗಳು ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.
ನಗರಸಭೆಯಲ್ಲಿ ಇಂದಿಗೆ ಭ್ರಷ್ಟಾಚಾರ ಕೊನೆಯಾಗಬೇಕು. ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸಲು ಅಧಿಕಾರಿಗಳು ಸಿದ್ದರಿರಬೇಕು ಇಲ್ಲದಿದ್ದರೇ ತಾವಾಗಿಯೇ ಬೇರೆಡೆಗೆ ಹೋಗಬಹುದು ಎಂದು ಬಹಳ ದಿನಗಳಿಂದ ಬಿಡು ಬಿಟ್ಟಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೇ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಷಾ ದಾಸರ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುನಂದಾ ಬಾಕಳೆ ಅವರನ್ನು ಅಭಿನಂಧಿಸಿ ಅವಳಿ ನಗರದ ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಬೇಕೆಂದರು. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ ಘೋಷಣೆ ಮಾಡಿದ್ದು ಅವಳಿ ನಗರದ ಅಭಿವೃದ್ದಿಗಾಗಿ ಇನ್ನಷ್ಟು ಅನುದಾನ ಕುರಿತು ಪ್ರಯತ್ನ ಮಾಡಲಾಗುವುದು. ಅಲ್ಲದೆ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಮುಖಂಡರುಗಳಾದ ಅನಿಲ್ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ ಅವರ ಒಗ್ಗಟ್ಟಿನ ಪ್ರಯತ್ನದಿಂದಾಗಿ ಬಿಜೆಪಿ ಗೆಲುವು ಸಾಧಿಸಲು ಸಾದ್ಯವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.