ಹೊಸದಿಗಂತ ವರದಿ,ಹೊನ್ನಾವರ:
ತಾಲೂಕಿನ ಕಾಸರಕೋಡದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಾಣಿಜ್ಯ ಬಂದರು ಪ್ರದೇಶಕ್ಕೆ ರಸ್ತೆ ನಿರ್ಮಾಣ ಕಾಮಗಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರಂಭವಾಗಿದ್ದು ಈ ಕುರಿತು ಉಪ ವಿಭಾಗ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದ ಸುಮಾರು 30 ಮೀನುಗಾರ ಮುಖಂಡರನ್ನು ಬಂಧಿಸಿ ಮಂಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪೊಲೀಸರ ಬಿಗು ಭದ್ರತೆಯಲ್ಲಿ ವಾಣಿಜ್ಯ ಬಂದರು ಪ್ರದೇಶಕ್ಕೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು ಸ್ಥಳೀಯ ಮೀನುಗಾರರು ರಸ್ತೆ ನಡುವೆ ಕುಳಿತು ಪ್ರತಿಭಟಿಸಿ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗ ಅಧಿಕಾರಿಯೊಂದಿಗೆ ವಾದಕ್ಕಿಳಿದ ಸಂದರ್ಭದಲ್ಲಿ ಪೊಲೀಸರು ಮೀನುಗಾರರನ್ನು ವಶಕ್ಕೆ ಪಡೆದುಕೊಂಡು ಕಾಮಗಾರಿ ನಡೆಸಲು ಅವಕಾಶ ಮಾಡಿ ಕೊಟ್ಟಿರುವುದಾಗಿ ತಿಳಿದು ಬಂದಿದೆ.
ರವಿವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೊನ್ನಾವರದ ತಹಶೀಲ್ಧಾರ ಕಚೇರಿಯಲ್ಲಿ ಸಭೆ ಕರೆದು ವಾಣಿಜ್ಯ ಬಂದರು ಕಾಮಗಾರಿಗೆ ಅಡ್ಡಿ ಮಾಡದಂತೆ ಸೂಚನೆ ನೀಡಿದ್ದರು ಅಲ್ಲದೇ ಉಚ್ಚ ನ್ಯಾಯಾಲಯದ ಆದೇಶದಂತೆ ಬಂದರು ಕಾಮಗಾರಿ ಪ್ರದೇಶಕ್ಕೆ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ಸಹಕರಿಸುವಂತೆ ಕೇಳಿ ಕೊಂಡಿದ್ದರು.
ಕಾಮಗಾರಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಬಹುತೇಕ ಕಡೆಗಳಲ್ಲಿ ಬ್ಯಾರಿಕಾಡ್ ಗಳನ್ನು ಅಳವಡಿಸಲಾಗಿದ್ದು ರಸ್ತೆ ಕಾಮಗಾರಿ ಕೆಲಸ ವೇಗದಲ್ಲಿ ಮುಂದುವರಿದಿದೆ.