ದಿಗಂತ ವರದಿ ಮಡಿಕೇರಿ:
ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿ ಯುವಕರನ್ನು ವೀರಾಜಪೇಟೆ ನಗರ ಠಾಣೆಯ ಪೊಲೀಸರು ಅಲ್ಲಿನ ಸುಂಕದಕಟ್ಟೆ ಬಳಿ ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಆನಂದನಗರ ನಿವಾಸಿ ಶಫೀಕ್ (23), ವೀರಾಜಪೇಟೆಯ ಸುಣ್ಣದ ಬೀದಿ ನಿವಾಸಿ ಸೂರ್ಯ (22), ವೀರಾಜಪೇಟೆ ವಿಜಯ ನಗರದ ಕಿರಣ್ (21), ವೀರಾಜಪೇಟೆ ನೆಹರು ನಗರದ ಜೈಸನ್ (21), ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯ ರಂಜನ್ (24) ಹಾಗೂ ಸುಂಕದಕಟ್ಟೆಯ ದೀಕ್ಷಿತ್ (23) ಬಂಧಿತ ಆರೋಪಿಗಳು.
ಈ ಪೈಕಿ ರಂಜನ್ ಹಾಗೂ ದೀಕ್ಷಿತ್ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದವರಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾಜು 50 ಸಾವಿರ ಮೌಲ್ಯದ 1 ಕೆ.ಜಿ. 225 ಗ್ರಾಂ ತೂಕದ ಗಾಂಜಾ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಸಿ.ಟಿ.ಜಯಕುಮಾರ್ ನಿರ್ದೇಶನದಲ್ಲಿ, ಸಿಪಿಐ ಬಿ.ಎಸ್ ಶ್ರೀಧರ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ನಗರ ಠಾಣೆಯ ಎಸ್ಐ ಜಗದೀಶ್ ಧೂಳ್ ಶೆಟ್ಟಿ, ಅಪರಾಧ ವಿಭಾಗದ ಎಎಸ್ಐ ಮೊಹಮ್ಮದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮುಸ್ತಫಾ, ರಜನ್, ಪಿ.ಎಂ. ಮುನೀರ್, ಗಿರೀಶ್, ಧರ್ಮ, ಶೆಟ್ಟಪ್ಪ ಬಾಗೆವಾಡಿ, ಸುಬ್ರಮಣಿ, ಸತೀಶ್ ಮತ್ತು ಚಾಲಕ ರಮೇಶ್ ಭಾಗವಹಿಸಿದ್ದರು.