ಇನ್ನು ಮುಂದೆ ಅಮೆಜಾನ್‌ನಲ್ಲಿ ಚನ್ನಪಟ್ಟಣದ ಗೊಂಬೆ, ಇಳಕಲ್- ಮೊಳಕಾಳ್ಮೂರು ಸೀರೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ ಹಾಗೂ ಅಮೆಜಾನ್‌ನೊಂದಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಬಡತನ ಹೋಗಲಾಡಿಸಲು ಆರ್ಥಿಕ ಚಟುವಟಿಕೆಗಳಲ್ಲಿ ಸರಕಾರದ ಮಧ್ಯಪ್ರವೇಶ ಅಗತ್ಯ. ಪ್ರಸ್ತುತ ಸ್ಥಿತಿಯಲ್ಲಿ ಬಡತನ ನಮ್ಮ ಬಹು ದೊಡ್ಡ ಶತ್ರು. ಗ್ರಾಮೀಣ ಜನರನ್ನು ಮೇಲೆತ್ತುವುದು ಮಾತ್ರವಲ್ಲ, ಬಡತನವನ್ನು ನಾವು ಸೋಲಿಸಬೇಕಿದೆ. ಬಡಜನರಿಗೆ ಎಲ್ಲಾ ರೀತಿಯ ನೆರವಿನ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಸಬಲರನ್ನಾಗಿಸಬೇಕಿದೆ ಎಂದರು. ಸಾಮರ್ಥ್ಯ ಮತ್ತು ವ್ಯಾಪಕತೆಯನ್ನು ಹೊಂದಿರುವ ಅಮೆಜಾನ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವೇ ಬಹು ದೊಡ್ಡ ಮಧ್ಯಸ್ಥಿಕೆಯಾಗಿ ಪರಿಣಮಿಸಿದೆ ಎಂದವರು ತಿಳಿಸಿದರು.

ಸಂಸ್ಕೃತಿಯ ವಿನಿಮಯ
ಈ ಒಪ್ಪಂದದಿಂದ ಬ್ರಾಂಡಿಂಗ್ ಹಾಗೂ ಉತ್ಪನ್ನಗಳ ಸಂಸ್ಕೃತಿಯ ವಿನಿಮಯ ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಪರಿವರ್ತನೆಯನ್ನು ನಾವು ಉಸಿರಾಗಿಸಿಕೊಳ್ಳಬೇಕು. ಉತ್ತಮ ಹಾಗೂ ಸುಸ್ಥಿರ ಮಾರುಕಟ್ಟೆಯೊಂದಿಗೆ ಕೌಶಲ, ಅರ್ಹತೆ ಹಾಗೂ ಛಲವನ್ನು ಹೊಂದಿರುವ ಗ್ರಾಮೀಣ ಮಹಿಳೆಯರಿಗೆ ಉತ್ತಮವಾದ ಕಾರ್ಯವಿಧಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಜೀವಿನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಇದರ ಯಶೋಗಾಥೆಯ ಮುಖಾಂತರ ಇತರೆ ಸಣ್ಣ ಉದ್ಯಮ ಹಾಗೂ ಚಟುವಟಿಕೆಗಳಿಗೆ ಇದೇ ಮಾದರಿಯನ್ನು ಅನುಸರಿಸಲು ಸಾಧ್ಯವಾಗಲಿದೆ ಎಂದರು.

ಕರ್ನಾಟಕ ರಾಜ್ಯವು ಪ್ರತಿಭೆ, ಉತ್ಪನ್ನ ಹಾಗೂ ಉದ್ಯಮಗಳಲ್ಲಿ ಪರಿಣಿತಿಯನ್ನು ಹೊಂದಿರುವ ರಾಜ್ಯವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರಿದ್ದಾರೆ. ಕರ್ನಾಟಕ ಸರಕಾರ ಮತ್ತು ಅಮೆಜಾನ್ ಸಂಸ್ಥೆ ಒಟ್ಟಾಗಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಬೇಕಿದೆ ಎಂದರು.

ಒಂದು ಜಿಲ್ಲೆ- ಒಂದು ಉತ್ಪನ್ನ
ಕೇಂದ್ರದ ಒಂದು ಜಿಲ್ಲೆ- ಒಂದು ಉತ್ಪನ್ನ ಕಾರ್ಯಕ್ರಮದಡಿ ಸ್ಥಳೀಯ ಪ್ರತಿಭೆ ಮತ್ತು ಉತ್ಪನ್ನಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಿದೆ. ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಹಾಗೂ ಮೊಳಕಾಳ್ಮೂರು ಸೀರೆಗಳು, ಆಹಾರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ ಆಧುನಿಕತೆಯ ಸ್ಪರ್ಶವನ್ನು ಒದಗಿಸಲು ಇದು ಸಹಕಾರಿಯಾಗಲಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಕೌಶಲಾಭಿವೃದ್ಧಿ ಸಚಿವ ಡಾ. ಅಶ್ವತ್ಥ್ ನಾರಾಯಣ್ ಮಾತನಾಡಿ, ಸಂಜೀವಿನಿ ಕಾರ್ಯಕ್ರಮದಡಿ ಮಾಡಿಕೊಂಡಿರುವ ಒಪ್ಪಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದರು.

ಅಮೆಜಾನ್ ಸಂಸ್ಥೆಯ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಮಾತನಾಡಿ, ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಬೆಂಬಲಿಸಲು ಅಮೆಜಾನ್ ಬದ್ಧವಾಗಿದೆ. ರಾಜ್ಯದಲ್ಲಿ ಮಹಿಳೆಯರು ತಯಾರಿಸುವ ವಿಶಿಷ್ಟ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಲು ಅಮೆಜಾನ್ ನೆರವು ನೀಡಲಿದೆ ಎಂದರು.

ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಮಂಜುಶ್ರೀ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!