ಹೊಸ ದಿಗಂತ ವರದಿ, ಕಾರವಾರ:
ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಅವರು ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಫಲವಾಗಿ ಶನಿವಾರದಿಂದಲೆ ಶಿರ್ವೆ ಗ್ರಾಮದ ವಿದ್ಯಾರ್ಥಿಗಳು ಹಾಗೂ ಜನತೆಯ ಅನುಕೂಲಕ್ಕಾಗಿ ಬಸ್ ಸಂಚಾರ ಶುರುವಾಗಲಿದೆ. ಶಿರ್ವೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪ್ರತಿದಿನ 18 ಕಿ.ಮೀ.ನಷ್ಟು ದೂರ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಬಗ್ಗೆ ಶುಕ್ರವಾರ ಮಾಧ್ಯಮಗಳು ಬೆಳಕು ಚೆಲ್ಲಿದ್ದವು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲಿ ಅಷ್ಟು ದೂರ ಸಾಗುವುದರಿಂದ ಆಯಾಸವಾಗಿ ಅವರ ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿರುವುದನ್ನು ಶಾಸಕರು ಅಧಿಕಾರಿಗಳ ಗಮನಕ್ಕೆ ತಂದು ಶನಿವಾರದಿಂದಲೆ ಬಸ್ ಸಂಚಾರ ಆರಂಭಿಸುವಂತೆ ಸೂಚಿಸಿದರು.
ಶಾಲಾ ಕಾಲೇಜು ಸಮಯಕ್ಕೆ ಸಂಚರಿಸಲಿದೆ ಬಸ್
ಸಾರಿಗೆ ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಶುಕ್ರವಾರ ಶಿರ್ವೆಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ 7.15 ಗಂಟೆ, ಮಧ್ಯಾಹ್ನ3 ಗಂಟೆಗೆ ಕಾರವಾರದಿಂದ ಬಸ್ ಹೊರಡಲಿದ್ದು, ಶಿರ್ವೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶಾಲಾ ಕಾಲೇಜು ಸಮಯಕ್ಕೆ ಅನುಕೂಲಕರವಾಗಿ ಶಿರ್ವೆಗೆ ತೆರಳಲಿದೆ.