ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಮಗಳು ಜಯ ಕಲ್ಯಾಣಿ ಹಾಗೂ ಅವರ ಪತಿ ಸತೀಶ್ ಅವರು ಇಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತನ್ನ ಪ್ರಿಯಕರ ಸತೀಶ್ ಅವರನ್ನು ಮದುವೆಯಾಗಿದ್ದರು. ಆದರೆ ತನ್ನ ಮದುವೆಗೆ ತಂದೆಯೇ ವಿಲನ್ ಆಗಿದ್ದು, ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿಸಬೇಕೆಂದು ಬೆಂಗಳೂರು ಕಮಿಷನರ್ ಕಚೇರಿಗೆ ಮೊನ್ನೆ ಭೇಟಿ ನೀಡಿದ್ದರು. ಈಗ ಮತ್ತೆ ತನ್ನ ತಂದೆಯಿಂದ ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ನೀಡುವಂತೆ ಮನವಿ ಮಾಡಿದ ಜಯ ಕಲ್ಯಾಣಿ, ಬೆಂಗಳೂರಿನ ಜಯಮಹಲ್ನಲ್ಲಿರುವ ಗೃಹ ಸಚಿವರ ಸರ್ಕಾರಿ ನಿವಾಸದಲ್ಲಿ ಆರಗ ಜ್ಞಾನೇಂದ್ರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ತನ್ನನ್ನು ಎಂ.ಬಿ.ಬಿ.ಎಸ್ ಪದವೀಧರೆ ಎಂದು ಪರಿಚಯಿಸಿಕೊಂಡ ಜಯ ಕಲ್ಯಾಣಿ , ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದು, ತಮ್ಮ ಪತಿಯವರ ವಿರುದ್ಧ ಸತ್ಯಕ್ಕೆ ದೂರವಾದ ದೂರು ದಾಖಲಿಸುವ ಪ್ರಯತ್ನದ ಬಗ್ಗೆ, ಅನುಮಾನವಿದ್ದು, ರಕ್ಷಣೆ ನೀಡಬೇಕೆಂದು ಗೃಹ ಸಚಿವರಲ್ಲಿ ವಿನಂತಿಸಿದ್ದಾರೆ.
ಸದ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.ಈ ಪ್ರಕರಣದ ವಿಚಾರವಾಗಿ ಸದ್ಯ ಗೃಹ ಸಚಿವರು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಜತೆ ಮಾತನಾಡಿದ್ದಾರೆ. ಬಳಿಕ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡುವಂತೆ ಜಯ ಕಲ್ಯಾಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.