ಹೊಸದಿಗಂತ ವರದಿ, ಕಲಬುರಗಿ:
ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದಲ್ಲಿ ನಡೆದಿದೆ.
ಭೂಮಿಕಾ (೩೬) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ, ಕಳೆದ ಐದು ವರ್ಷದ ಹಿಂದೆ ದಿಗ್ಗಾಂವ್ ಗ್ರಾಮದ ನಿವಾಸಿ ಶರಣಬಸಪ್ಪ ಎಂಬುವವರೊಂದಿಗೆ ವಿವಾಹವಾಗಿದ್ದರು.
ಭೂಮಿಕಾ ಅವರು ಗ್ರಾಮದ ಸರ್ಕಾರಿ ಫ್ರೌಡ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದರು. ಬೆಳಿಗ್ಗೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಾರೆ.
ಅತ್ತ ಶಾಲೆಗೂ ಹೋಗದೆ ಇತ್ತ ಮನೆಗೂ ಬಾರದಿದ್ದಾಗ ಆತಂಕಗೊಂಡ ಮನೆಯವರು ಹುಡುಕಲಾರಂಬಿಸಿದ್ದಾರೆ. ಈ ವೇಳೆ ಬಾವಿಯ ಬಳಿ ಭೂಮಿಕಾ ಚಪಲಿ ಸಿಕ್ಕಾಗ ಅನುಮಾನಗೊಂಡು ಬಾವಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ.
ಮದುವೆಯಾಗಿ ಐದು ವರ್ಷ ಕಳೆದರೂ ಸಹ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.