ಹೊಸದಿಗಂತ ಡಿಜಿಟಲ್ ಡೆಸ್ಕ್
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚಂಡೀಗಢವನ್ನು ತಕ್ಷಣವೇ ಪಂಜಾಬ್ ರಾಜ್ಯಕ್ಕೆ ವರ್ಗಾಯಿಸುವಂತೆ ವಿಧಾನಸಭೆಯಲ್ಲಿ ಶುಕ್ರ ವಾರ ನಿರ್ಣಯವನ್ನು ಮಂಡಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢವು ಪಂಜಾಬ್ ಹಾಗೂ ಹರಿಯಾಣಗಳ ರಾಜಧಾನಿಯಾಗಿದೆ. ಚಂಡೀಗಢವು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಲ್ಲಿನ ಉದ್ಯೋಗಿಗಳಿಗೆ ಇನ್ಮುಂದೆ ಕೇಂದ್ರೀಯ ಸೇವಾ ಕಾಯ್ದೆ (ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿರುವ ಕಾನೂನು) ಯ ಸೇವಾ ನಿಯಮಗಳು ಅನ್ವಯಗೊಳ್ಳುತ್ತವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು.
ಈ ಕುರಿತು ಇಂದು ಸದನದಲ್ಲಿ ನಿರ್ಣಯವನ್ನು ಮಂಡಿಸಿದ ಸಿಎಂ ಭಗವಂತ್ ಮಾನ್, ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವಂತೆ ಕೇಂದ್ರ – ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ ನಿಯಮಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಪಂಜಾಬ್ ರಾಜ್ಯವನ್ನು 1966ರಲ್ಲಿ ಮರುಸಂಘಟಿಸಿ ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳನ್ನಾಗಿ ಘೋಷಿಸಿಸಲಾಯಿತು. ಚಂಡೀಗಢವನನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಯಿತು. ದೇಶದಲ್ಲಿ ಈ ಹಿಂದಿನ ಎಲ್ಲಾ ಪೂರ್ವನಿದರ್ಶನಗಳಲ್ಲಿ ರಾಜ್ಯವನ್ನು ವಿಭಜಿಸಿದಾಗ ರಾಜಧಾನಿ ಮಾತೃರಾಜ್ಯದಲ್ಲಿ ಉಳಿದಿರುವುದನ್ನು ಗಮನಿಸಬಹುದಾಗಿದೆ. ಆದ್ದರಿಂದ ಚಂಡೀಗಢವನ್ನು ಪಂಜಾಬ್ ರಾಜ್ಯಕ್ಕೆ ವರ್ಗಾಯಿಸಲು ಪಂಜಾಬ್ ತನ್ನ ಹಕ್ಕು ಮಂಡಿಸಲಿದೆ ಎಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಕೈಗೊಳ್ಳಲಾಗಿದೆ.
ಚಂಡೀಗಢದ ಆಡಳಿತವನ್ನು ಪಂಜಾಬ್ ಮತ್ತು ಹರಿಯಾಣದ ಅಧಿಕಾರಿಗಳು 60:40 ಅನುಪಾತದಲ್ಲಿ ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ಈ ನಿಯಮಕ್ಕೆ ವಿರುದ್ಧವಾಗಿ ಚಂಡೀಗಢಕ್ಕೆ ಹೊರಗಿನ ಅಧಿಕಾರಿಗಳನ್ನು ನಿಯೋಜಿಸಿದೆ ಮತ್ತು ಚಂಡೀಗಢ ಆಡಳಿತದ ನೌಕರರಿಗೆ ಕೇಂದ್ರ ನಾಗರಿಕ ಸೇವಾ ನಿಯಮಗಳನ್ನು ಅನ್ವಯಿಸುತ್ತಿದೆ. ಇದು ಹಿಂದಿನ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಮಾನ್ ನಿರ್ಣಯದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ