ಹೊಸದಿಗಂತ ಡಿಜಿಟಲ್ ಡೆಸ್ಕ್
ಕರ್ನಾಟಕದಲ್ಲಿ ನಾವು 150 ಸ್ಥಾನಗಳನ್ನು ಗಳಿಸುವ ಗುರಿಯಲ್ಲಿ ಸಾಗಬೇಕು. ನಮಗೆ ಮಾರ್ಜಿನ್ ಸ್ಥಾನಗಳ ನಿರೀಕ್ಷೆ ಬೇಡ. ಅದಕ್ಕಾಗಿ ಯಾವ ರೀತಿ ಜನರ ಬಳಿ ಹೋಗಬೇಕು. ಅವರ ಆಸೆ, ಅಗತ್ಯವನ್ನು ಅರಿಯುವ ಕಾರ್ಯ ಮಾಡಿ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ಬೆಂಗಳೂರು ನಗರ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ ಅವರು, ಪಕ್ಷ ಸಂಘಟನೆಯಲ್ಲಿ ಯಾರು ತೊಡಗಿದ್ದಾರೆ, ತೊಡಗಿಲ್ಲ ಅನ್ನುವುದು ಹುಡುಕುವುದು ಬಹಳ ಸುಲಭ. ಪಕ್ಷ ನಿಷ್ಠೆಯನ್ನು ಮೊದಲು ಪರಿಗಣಿಸಿ, ಅವರು ರಾಜಕೀಯ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಸಮಯದಿಂದ ಇದ್ದಾರೆ ಎನ್ನುವುದು ಮುಖ್ಯವಲ್ಲ. ಅದರಿಂದ ನಾವು ಈಗಲೇ ಅಭ್ಯರ್ಥಿ ಆಯ್ಕೆಗೆ ನಿಯಮಾವಳಿ ರೂಪಿಸಿಕೊಳ್ಳಬೇಕು. ಬದ್ಧತೆ, ಪಕ್ಷ ಸಂಘಟನೆಗೆ ಕಾರ್ಯ ಕೈಗೊಳ್ಳುವವರಿಗೆ ಅವಕಾಶ ನೀಡಬೇಕು. 150ಕ್ಕಿಂತ ಒಂದು ಸ್ಥಾನ ಸಹ ಕಡಿಮೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ 70 ಲಕ್ಷ ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಇದು ಸಣ್ಣ ವಿಚಾರವಲ್ಲ. ಬಿಜೆಪಿಯ ಸುಳ್ಳನ್ನು ಜನರ ಮುಂದಿಡಬೇಕು. ರಾಜ್ಯ ಹಾಗೂ ರಾಷ್ಟ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಮಾಡಿದ ಸಾಧನೆ ದೊಡ್ಡದಿದೆ. ಇಂದು ನಾವು ಅದನ್ನು ಜನರಿಗೆ ತಿಳಿಸಬೇಕಿದೆ. ಇದಕ್ಕೆ ರಾಜ್ಯದಲ್ಲಿ ಒಟ್ಟಾಗಿ ಶ್ರಮಿಸಿ 150 ಸ್ಥಾನ ಗೆಲ್ಲಿಸಿಕೊಂಡು ಬನ್ನಿ. ನೀವು ಯಾವಾಗ ಬೇಕಾದರೂ ಕರೆಯಿರಿ ರಾಜ್ಯದ ಯಾವುದೇ ಮೂಲೆಗೆ ಬರಲು ಸಿದ್ಧ. ನಮ್ಮ ಸರ್ಕಾರ ರಾಜ್ಯದಲ್ಲಿ ಬರಬೇಕಿದೆ. ಕರ್ನಾಟಕವನ್ನು ಮತ್ತೊಮ್ಮೆ ಸರಿದಾರಿಗೆ ತರಬೇಕೆಂದು ಸಲಹೆ ಇತ್ತರು.