ಹೊಸದಿಗಂತ ವರದಿ,ಮಡಿಕೇರಿ:
ಅರಣ್ಯ ಇಲಾಖೆ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ 8 ನೇ ಆವತ್ತಿಯ ‘ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಶುಕ್ರವಾರ ಸಂಜೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಚಾಲನೆ ನೀಡಿದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ ಬೋಪಯ್ಯ ಅವರು ಮಾತನಾಡಿ, ಪಕ್ಷಿಗಳು ಮನುಷ್ಯನ ಜೀವನದಲ್ಲಿ ಹಾಸುಹೋಕ್ಕಾಗಿವೆ. ಸಂಜೆ ವೇಳೆಯಲ್ಲಿ ಮನೆಯ ಪಕ್ಕದ ಮರಗಳಲ್ಲಿ ಕುಳಿತ ಪಕ್ಷಿಗಳನ್ನು ವಿಕ್ಷೀಸುವುದು ಒಂದು ಸುಂದರ ಕ್ಷಣ ಎಂದರು.
ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆ ಮತ್ತು ಅದರ ಪಾತ್ರ ಮತ್ತು ಮಹತ್ವದ ಬಗ್ಗೆ ಒಂದೊ ಒಳ್ಳೆಯ ಸಂದೇಶ ಪಕ್ಷಿ ಹಬ್ಬ ಕಾರ್ಯಕ್ರಮದ ಮೂಲಕ ಜನರಿಗೆ ತಲುಪುವಂತಾಗಬೇಕು ಎಂದರು.
ವನ್ಯ ಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ್ ಗೋಗಿ ಅವರು ಮಾತನಾಡಿ, ಪ್ರಕೃತಿಯಲ್ಲಿ ಪ್ರತಿಯೊಂದು ವಿಷಯವೂ ಒಂದಕ್ಕೊಂದು ಅವಲಂಬಿಸಿಕೊಂಡಿದೆ. ಗಿಡ ಮರಗಳೂ ಪಕ್ಷಿಯನ್ನು ಅವಲಂಬಿಸಿಕೊಂಡಿವೆ. ಪಕ್ಷಿಗಳು ಕೂಡಾ ಮರ ಗಿಡಗಳನ್ನು ಅವಲಂಬಿಸಿಕೊಡಿವೆ. ಹಲವಾರು ವಿಧದ ಸಸ್ಯಗಳ ಪರಾಗಸ್ಪರ್ಶಕ್ಕೆ ಪಕ್ಷಿಗಳು ಸಹಕಾರಿಯಾಗಿದೆ. ಗಿಡಗಳ ಬೆಳವಣಿಗೆಗೆ ಪಕ್ಷಿಗಳು ಕೂಡಾ ಮನುಷ್ಯನಂತೆ ಪ್ರಮುಖ ಪಾತ್ರ ವಹಿಸುತ್ತವೆ. ಹಕ್ಕಿಗಳಿಂದ ಸುತ್ತಲಿನ ಪರಿಸರವು ವರ್ಣಮಯವಾಗಿ ಕಾಣುತ್ತದೆ. ವ್ಶೆಜ್ಞಾನಿಕ ಮನೋಭಾವದ ಜೊತೆಗೆ ಪ್ರಕೃತಿಯ ಬಗ್ಗೆ ಒಲವು ತೋರಲು ಪಕ್ಷಿಗಳು ಸಹಕಾರಿಯಾಗಿವೆ ಎಂದರು.
‘ಪಕ್ಷಿಗಳು ಒಟ್ಟಾಗಿ ಜೀವನ ನಡೆಸುತ್ತವೆ. ಹಕ್ಕಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಟ್ಟಾಗಿ ತೆರಳುತ್ತದೆ. ಪಕ್ಷಿಗಳು ತಮ್ಮದೇ ಆದ ಸಂವಹನ ನಡೆಸುತ್ತದೆ. ಇದು ಮನುಷ್ಯನಿಗೆ ಅರ್ಥವಾಗುವುದು ಕಷ್ಟ. ಆದರೆ ಪಕ್ಷಿಗಳಿಗೆ ಅದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.’
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಕೊಡಗು ಜಿಲ್ಲೆ ಪಶ್ಚಿಮ ಘಟ್ಟಗಳ ಮತ್ತು ಬಯಲು ಸೀಮೆಯ ನಡುವೆ ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ದಟ್ಟ ಕಾಡುಗಳು ಹಾಗೂ ಹಲವಾರು ಪವಿತ್ರ ಮರಗಳ ತೋಪುಗಳಿಂದ ಸಮೃದ್ಧವಾಗಿದೆ ಎಂದರು.
ಮುನ್ನೂರಕ್ಕೂ ಹೆಚ್ಚು ವಿವಿಧ ಪ್ರಬೇಧ ಪಕ್ಷಿಗಳಿದ್ದು, ಈ ಪ್ರದೇಶವನ್ನು ಪಕ್ಷಿಗಳು ಮನೆ ಮಾಡಿಕೊಂಡಿವೆ. ಇವುಗಳ ಜೊತೆಗೆ ಪ್ರತಿ ವರ್ಷ ಹಲವಾರು ವಲಸೆ ಪಕ್ಷಿಗಳು ಮಲೆನಾಡು ಪ್ರದೇಶಗಳಿಗೆ ಭೇಟಿ ನೀಡುತ್ತವೆ ಎಂದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಎಸ್.ರವಿಕುಶಾಲಪ್ಪ, ಶಾಸಕ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷೆ ಎನ್.ಪಿ.ಅನಿತಾ, ಮೈಸೂರು ಹಾಗೂ ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್, ಸರಸ್ವತಿ ಮಿಶ್ರಾ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಕಾ.ರಾಮೇಶ್ವರಪ್ಪ, ಅರಣ್ಯ ಕಾಲೇಜಿನ ಸಿ.ಜಿ.ಕುಶಾಲಪ್ಪ. ಮಡಿಕೇರಿ ವನ್ಯಜೀವಿ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಇತರರು ಇದ್ದರು.