ಹೊಸದಿಗಂತ ವರದಿ,ಮಂಗಳೂರು:
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ವಿಮಾನಯಾನ ಪ್ರಯಾಣಿಕರಿಗೆ ಶುಭಸುದ್ದಿ. ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಒದಗಿಸುವ ವಿಮಾನ ಸೇವೆ ಆರಂಭಿಸಲು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ಇಂಡಿಗೋ ವಿಮಾನಯಾನ ಸಂಸ್ಥೆಗೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ಇಂಡಿಗೋ ಸಂಸ್ಥೆಯವರು ಇದೇ ಮೇ 1ರಿಂದ ವಾರದಲ್ಲಿ 4 ದಿನ ಮಂಗಳೂರಿಗೆ ಮತ್ತು ಮೇ 3ರಿಂದ ವಾರದಲ್ಲಿ 3 ದಿನ ಮೈಸೂರಿಗೆ ವಿಮಾನ ಹಾರಾಟ ಪ್ರಾರಂಭಿಸಲಿದ್ದಾರೆ ಎಂದು ಸಚಿವರ ದೆಹಲಿ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವನ್ನಾಗಿ ಮಾರ್ಪಡಿಸಿದೆ. ಹುಬ್ಬಳ್ಳಿಯಿಂದ ಮೈಸೂರು, ಮಂಗಳೂರು ನಗರಗಳಿಗೆ ವಿಮಾನ ಯಾನ ಸೇವೆ ಅವಶ್ಯಕತೆ ಇತ್ತು. ಬಹುದಿನ ಬೇಡಿಕೆಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಇದನ್ನು ಸಾಧ್ಯವಾಗಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಇಂಡಿಗೋದ ಆಡಳಿತ ವರ್ಗಕ್ಕೆ ಸಚಿವ ಜೋಶಿಯವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.