ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀರಿನ ವಿಚಾರವಾಗಿ ಪಂಜಾಬ್ ಹಾಗೂ ಹರಿಯಾಣದಲ್ಲಿ ಆಪ್ ಪಕ್ಷದಲ್ಲಿ ಆಂತರಿಕ ಯುದ್ಧ ಶುರುವಾಗಿದೆ. ಎಸ್ವೈಎಲ್(ಸಟ್ಲೇಜ್-ಯಮುನಾ ಲಿಂಕ್) ಕಾಲುವೆ ಮೂಲಕ ಹರಿಯಾಣಕ್ಕೆ ಇದುವರೆಗೂ ನೀರು ಪೂರೈಕೆ ಆಗಿಲ್ಲ ಎಂದು ಎಎಪಿ ರಾಜ್ಯಸಭಾ ಸಂಸದ, ಹರಿಯಾಣ ಉಸ್ತುವಾರಿ ಸುಶೀಲ್ ಗುಪ್ತಾ ಪಂಜಾಬ್ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ ಪಂಜಾಬ್ನ ಆಡಳಿತ ಪಕ್ಷದ ವಿತ್ತ ಸಚಿವ ಹರ್ಪಾಲ್ ಚೀಮಾ, SYL ಮೂಲಕ ಹರಿಯಾಣಕ್ಕೆ ಒಂದೇ ಒಂದು ಹನಿ ನೀರು ಹೋಗುವುದಿಲ್ಲ ಎಂದು ಚೀಮಾ ಖಡಾಖಂಡಿತವಾಗಿ ಹೇಳಿದರು.
ಎಎಪಿ ರಾಜ್ಯಸಭಾ ಸಂಸದ ಮತ್ತು ಹರಿಯಾಣ ಉಸ್ತುವಾರಿ ಸುಶೀಲ್ ಗುಪ್ತಾ 2025 ರ ವೇಳೆಗೆ ಹರಿಯಾಣದಲ್ಲಿ ಎಎಪಿ ಸರ್ಕಾರ ರಚನೆಯಾಗಲಿದೆ. ನಂತರ ಪಂಜಾಬ್ ಸರ್ಕಾರದ ಮೂಲಕವೇ ಎಸ್ವೈಎಲ್ ಮೂಲಕ ಪ್ರತಿಯೊಂದು ಹೊಲಕ್ಕೂ ನೀರು ಹರಿಯುವಂತೆ ಮಾಡುವುದಾಗಿ ಗುಪ್ತಾ ಹರಿಯಾಣ ಜನರಿಗೆ ಭರವಸೆ ನೀಡಿದ್ದಾರೆ.
ಗುಪ್ತಾ ಹೇಳಿಕೆ ಬಗ್ಗೆ ಪಂಜಾಬ್ ಯಾವುದೇ ರೀತಿಯ ಹೇಳಿಕೆಯನ್ನು ಬಿಡುಗಡೆ ಮಾಡಲಿಲ್ಲ. ಆದರೆ, ಒಂದು ವಿಡಿಯೋ ಸಂದೇಶದ ಮೂಲಕ ಪಂಜಾಬ್ನಿಂದ ಒಂದೇ ಒಂದು ಹನಿ ನೀರನ್ನೂ ಆಚೆ ಹರಿಯಲು ಬಿಡುವುದಿಲ್ಲ ಎಂದು ಚೀಮಾ ಪುನರುಚ್ಚರಿಸಿದ್ದಾರೆ. ಪಂಜಾಬ್ನ ನದಿ ತೀರದ ಹಕ್ಕುಗಳ ಪರವಾಗಿ ನಿಲ್ಲುವುದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ತಮ್ಮ ಆಡಳಿತದ ಅವಧಿಯಲ್ಲಿ ಎಎಪಿ ಸೃಷ್ಟಿಸಿದ ವಿಷಯದ ಮೇಲೆ ಪಕ್ಷಗಳು ದಾಳಿ ನಡೆಸುತ್ತಿರುವುದು ವಿಚಿತ್ರವಾಗಿದೆ. ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಂತರ್ಜಲ ಸಂರಕ್ಷಣೆ ಮಾಡಲು ಯೋಜನೆ ರೂಪಿಸುತ್ತಿರುವುದಾಗಿ ಹರ್ಪಲ್ ಚೀಮಾ ಸ್ಪಷ್ಟ ಪಡಿಸಿದ್ದಾರೆ.