ಹೊಸದಿಗಂತ ಡಿಜಿಟಲ್ ಡೆಸ್ಕ್
ʼವಿಮಲ್ʼ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಾಲಿವುಡ್ನ ಖಿಲಾಡಿ ಅಕ್ಷಯ್ ಕುಮಾರ್ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾನ್ ಮಸಾಲಾ ಬ್ರಾಂಡ್ನ್ನು ಪ್ರಚಾರ ಮಾಡಿದ್ದಕ್ಕಾಗಿ ಅಭಿಮಾನಿಗಳು ಅಕ್ಷಯ್ ಕುಮಾರ್ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಅಕ್ಷಯ್ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಹಿಂದೆಸರಿಯುತ್ತೇನೆ ಎಂದು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ನನ್ನೆಲ್ಲಾ ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳಲು ಬಯಸುತ್ತೇನೆ. ನಾನು ತಂಬಾಕು ಉತ್ಪನ್ನಗಳನ್ನು ಯಾವಾಗಲೂ ಪ್ರಚಾರ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ವಿಮಲ್ ಇಲೈಚಿಯವರೊಂದಿಗೆ ಕಾಣಿಸಿಕೊಂಡಿರುವ ಬಗ್ಗೆ ನಿಮ್ಮ ಭಾವನೆಗಳಿಗೆ ಗೌರವ ಕೊಟ್ಟು ನಾನು ಅದರಿಂದ ಹಿಂದೆ ಸರಿಯುತ್ತಿದ್ದೇನೆ. ಇಲ್ಲಿಯವರೆಗೆ ಅದರಿಂದ ಬಂದ ಹಣವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸುವೆ. ಮತ್ತು ಮುಂದಿನ ದಿನಗಳಲ್ಲಿ ನನ್ನ ಆಯ್ಕೆಗಳ ಕುರಿತು ಗಮನ ಹರಿಸುತ್ತೇನೆ” ಎಂದಿದ್ದಾರೆ.
— Akshay Kumar (@akshaykumar) April 20, 2022
ಇತ್ತೀಚೆಗೆ ವಿಮಲ್ ಜಾಹಿರಾತೊಂದರಲ್ಲಿ ಅಜಯ್ ದೇವಗನ್ ಹಾಗೂ ಶಾರೂಕ್ ಖಾನ್ ಅವರೊಂದಿಗೆ ಅಕ್ಷಯ್ ಕಾಣಿಸಿಕೊಂಡಿದ್ದರು. ಇದರೊಟ್ಟಿಗೇ “ನಾನು ತಂಬಾಕು ಉತ್ಪನ್ನಗಳಕುರಿತು ಪ್ರಮೋಷನ್ ಮಾಡುವುದಿಲ್ಲ” ಎಂದು ಹೇಳಿರುವ ಅವರ ಹಳೆ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜಾಹಿರಾತಿನಲ್ಲಿ ಅವರು ಏಲಕ್ಕಿ ಕುರಿತಾಗಿ ಪ್ರಚಾರ ಮಾಡಿದರೂ ಸಹ ಅಭಿಮಾನಿಗಳು ಪಾನ್ ಮಸಾಲಾ ತಯಾರಿಸಿವವರ ಪ್ರಚಾರ ಮಾಡಿತ್ತಿರುವ ಕುರಿತು ವಿರೋಧ ವ್ಯಕ್ತಪಡಿಸಿದ್ದರು.