ಹೊಸದಿಗಂತ ವರದಿ, ಮಂಡ್ಯ
ತಾಲೂಕಿನ ಕಾರಸವಾಡಿ ಗ್ರಾಮದಲ್ಲಿ ಬೈರವೇಶ್ವರ, ಮಂಚಮ್ಮ ದೇವರ ಹಬ್ಬದ ಪ್ರಯುಕ್ತ ರಂಗಕುಣಿತ, ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಗ್ರಾಮದ ರಂಜಿತಾ ಅವರು ರಂಗಕುಣಿತ ಮಾಡುವ ಮೂಲಕ ಗಮನ ಸೆಳೆದರು. ಇವರೊಂದಿಗೆ ಕೀಲಾರ ಗ್ರಾಮದ ರಮೇಶ್, ರವಿ ಇತರರು ಹೆಜ್ಜೆ ಹಾಕಿದರು.
ಗ್ರಾಮದ ಮುಖಂಡ ಕಾರಸವಾಡಿ ಮಹದೇವು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬ ಆಚರಣೆ ಮಾಡಲಾಗಿರಲಿಲ್ಲ. ಈ ಬಾರಿ ಭೈರವೇಶ್ವರ ಹಬ್ಬವನ್ನು ವಿಜೃಂಭಣೆಯಿಂದ ಮಾಡಲು ಗ್ರಾಮದ ಮುಖಂಡರು ನಿರ್ಧಾರ ಮಾಡಿದರು. ಅದರಂತೆ ಕಳೆದ ಶುಕ್ರವಾರದಿಂದ ಹಬ್ಬದ ಪೂಜಾ ಕಾರ್ಯಕ್ರಮ ಪ್ರಾರಂಭವಾಗಿದೆ ಎಂದರು.
ಶುಕ್ರವಾರ ಕಂಬ ಕಟ್ಟುವುದು, ಕರಗ ಉತ್ಸವ, ಶನಿವಾರ ಪಟ್ಟಲದಮ್ಮನ ಕೊಂಡೋತ್ಸವ, ಭಾನುವಾರ ಬೆಳಗ್ಗೆ ಭೈರವೇಶ್ವರ ಕೊಂಡೋತ್ಸವ, ಸೋಮವಾರ ಮುಂಜಾನೆವರೆಗೆ ಕೋಲಾಟ, ರಂಗಕುಣಿತ, ಬಂಡಿ ಉತ್ಸವ ಹಾಗೂ ಬಾಯಿ ಬೀಗ, ಬಂಡಿ ಉತ್ಸವ, ಡೊಳ್ಳು ಕುಣಿತ, ಬೋರೇ ದೇವರ ಉತ್ಸವ ನಡೆಯಿತು ಎಂದರು.
ಗ್ರಾಮದಲ್ಲಿರುವ ಎತ್ತಿನ ಗಾಡಿಗಳನ್ನು ಎತ್ತುಗಳಿಗೆ ಕಟ್ಟಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಪೂಜೆ ನಡೆಯುತ್ತದೆ. ಗ್ರಾಮದ ಸುಮಾರು 50ಕ್ಕೂ ಹೆಚ್ಚು ಎತ್ತುಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಬಳಿಕ ಕೊಂಡೊತ್ಸವ, ಬಾಯಿ ಬೀಗ ಎಲ್ಲ ಪೂಜಾ ಕಾರ್ಯಗಳು ಸುಗಮವಾಗಿ ನಡೆಯಿತು ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ