ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದಲ್ಲಿ ಕಲೆ ವರ್ಷ ತೀವ್ರ ಸಂಚಲನ ಸೃಷ್ಟಿಸಿದ್ದ ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ ಸಾವಿನ ಕೇಸ್ ಕುರಿತು ಕೋರ್ಟ್ ತೀರ್ಪು ನೀಡಿದೆ.
ಕಳೆದ ವರ್ಷ ಜೂನ್ನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾಳ ಪತಿಯನ್ನು ವರದಕ್ಷಿಣೆ ಸಾವು ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಕೇರಳದ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ-1 ಸುಜಿತ್ ಕೆ ಎನ್ ಅವರು ಐಪಿಸಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿ ವರದಕ್ಷಿಣೆ ಸಂಬಂಧಿತ ಕಿರುಕುಳದ ಅಪರಾಧದ ಮೇಲೆ ವಿಸ್ಮಯಾಳ ಪತಿ ಎಸ್. ಕಿರಣ್ ಕುಮಾರ್ ಅನ್ನು ಆರೋಪಿ ಎಂದು ಘೋಷಿಸಿದ್ದು, ನಾಳೆ(ಮಂಗಳವಾರ) ಶಿಕ್ಷೆ ಪ್ರಕಟಿಸುವ ನಿರೀಕ್ಷೆಯಿದೆ.
ತೀರ್ಪು ಪ್ರಕಟವಾದ ಬಳಿಕ ಮಾತನಾಡಿದ ವಿಸ್ಮಯಾಳ ತಂದೆ, ಮಗಳಿಗೆ ನ್ಯಾಯ ಸಿಕ್ಕಿದೆ ಎಂದು ಕಣ್ಣೀರು ಹಾಕಿದರು. ಪ್ರಾಸಿಕ್ಯೂಷನ್ ಮತ್ತು ತನಿಖಾ ತಂಡದ ಪ್ರಯತ್ನಗಳಿಗೆ ಕೃತಜ್ಞತೆಗಳನ್ನು ಹೇಳಲು ನನ್ನ ಬಳಿ ಪದಗಳಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಕರಣ ಏನು?:
ವಿಸ್ಮಯಾ ಅವರು ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಾಮಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಘಟನೆಗೆ ಒಂದು ದಿನ ಮೊದಲು, ವಿಸ್ಮಯಾ ತನ್ನ ಸಂಬಂಧಿಕರಿಗೆ ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ವಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸಿದ್ದಳು. ಜೊತೆಗೆ ತನ್ನ ದೇಹದ ಮೇಲಾದ ಗಾಯಗಳು ಮತ್ತು ಹೊಡೆತಗಳ ಗುರುತುಗಳುಳ್ಳ ಫೋಟೋಗಳನ್ನು ರವಾನಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.ತನಿಖೆ ನಡೆಸಿದ ಪೊಲೀಸರು, ವರದಕ್ಷಿಣೆ ಕಿರುಕುಳದಿಂದ ವೈದ್ಯ ವಿದ್ಯಾರ್ಥಿನಿ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೇರಳ ಪೊಲೀಸರು 500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು.