ಹೊಸದಿಗಂತ ಡಿಜಿಟಲ್ ಡೆಸ್ಕ್
ಅಸ್ಸಾಂ ರಾಜ್ಯದ ಮಂದಾ ಜಿಲ್ಲೆಯ ಮಂಗಲ್ಡೋಯಿ ನಿವಾಸಿ ಉಮಾ ಮಂಡಲ್ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರು. 1894 ರ ಜನವರಿ ಮಾಸದಲ್ಲಿ ಮಂಗಲ್ಡೊಯ್ ಕಂದಾಯ ಉಪವಿಭಾಗ ವ್ಯಾಪ್ತಿಯ ರೈತರು ಬ್ರಿಟೀಷರ ವಿರುದ್ಧ ದಂಗೆಯೆದ್ದರು. ಭೂಕಂದಾಯ ದರ ಹೆಚ್ಚಳ ರೈತಾಪಿ ವರ್ಗದ ಆಕ್ರೋಶಕ್ಕೆ ಕಾರಣವಾಗಿತ್ತು. ಉಮಾ ಮಂದಾ ಈ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ದಂಗೆಗೆ ರೈತರನ್ನು ಸಂಘಟಿಸಿದರು. 28 ಜನವರಿ 1894 ರಂದು ಅಧಿಕಾರಿಗಳು ಮತ್ತು ಪೊಲೀಸರು ಮಂಗಲ್ಡೋಯಿ ಗ್ರಾಮಕ್ಕೆ ಆದಾಯ ಸಂಗ್ರಹಿಸಲು ಹೋದಾಗ, ಸರ್ಕಾರದ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ರೈತರು ಅವರನ್ನು ಸುತ್ತುವರೆದರು. ಅದರ ನಂತರ, ದರ್ರಾಂಗ್ ಜಿಲ್ಲೆಯ ಪಥರ್ಘಾಟ್ನ ಬಂಡಾಯ ರೈತರು ಅಲ್ಲಿನ ಪೊಲೀಸ್ ಠಾಣೆಯನ್ನು ಧ್ವಂಸಗೈಯ್ಯಲು ಮೆರವಣಿಗೆಯಲ್ಲಿ ಧಾವಿಸಿದರು. ಇದರಿಂದ ಆತಂಕಿತರಾದ ಪೊಲೀಸರು ರೈತರನ್ನು ಹಿಮ್ಮೆಟ್ಟಿಸಲು ಗುಂಡು ಹಾರಿಸಿದರು. ಇದರಿಂದಾಗಿ ಅನೇಕ ರೈತರು ಸಾವನ್ನಪ್ಪಿದರು ಹಾಗೂ ನೂರಾರು ರೈತರು ಗಾಯಗೊಂಡರು. ಇದೇ ವೇಳೆ ಪೊಲೀಸರ ಗುಂಡು ತಗುಲಿ ಉಮಾ ಮಂಡಲ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ