ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಯು ಭಾರತದೊಂದಿಗೆ ಸೌಹಾರ್ದತೆ ಬಯಸುತ್ತೇವೆ ಎಂದಿದೆ. ಅಪ್ಘಾನಿಸ್ತಾನದ ರಕ್ಷಣಾ ಸಚಿವ ಮುಲ್ಲಾ ಯಾಕುಬ್ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಿಎನ್ಎನ್ ನ್ಯೂಸ್-18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಆತ ಪಾಕಿಸ್ತಾನದೊಂದಿಗೆ ಈಗಾಗಲೇ ಕೆಲವು ವಿಷಯಗಳಲ್ಲಿ ಅಪ್ಘನ್ ಸರ್ಕಾರ ಉತ್ತಮ ಸಂಬಂಧ ಹೊಂದಿದೆ ಎಂಬುದರ ಹೊರತಾಗಿಯೂ ಭಾರತದೊಂದಿಗೆ ಅಪ್ಘನ್ ಆಡಳಿತವು ಸೌಹಾರ್ದಯುತ ಸಂಬಂಧ ಹೊಂದಲು ಬಯಸಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಅಲ್ಲದೇ ಇತರ ದೇಶಗಳ ಮೇಲೆ ಆಕ್ರಮಣ ಮಾಡಲು ಅಪ್ಘನ್ ನೆಲ ಬಳಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾನೆ.
ಕಂದಹಾರ್ ವಿಮಾನ ಅಪಹರಣವನ್ನು ಉಲ್ಲೇಖಿಸಿ ಮಾತನಾಡಿದ ಆತ “ಈ ಹಿಂದೆಯೂ ಕೂಡ ನಮ್ಮ ಸಂಬಂಧ ಭಾರತದೊಂದಿಗೆ ಉತ್ತಮವಾಗೇ ಇತ್ತು, ಭಾರತದ ವಿಮಾನ ಅಪಹರಣವಾದಾಗ ಇತರ ಎಲ್ಲಾ ರಾಷ್ಟ್ರಗಳು ವಿಮಾನವನ್ನು ಹೆಚ್ಚುಕಾಲ ತಂಗಲು ಬಿಡಲಿಲ್ಲ. ಆದರೆ ನನ್ನ ತಂದೆ ಅಮೀರ್ ಉಲ್ ಮೊಮಿನ್ ಭಾರತದ ಮೇಲಿನ ಗೌರವದಿಂದ ಅಪ್ಘನ್ ನಲ್ಲಿ ವಿಮಾನ ತಂಗಲು ಅವಕಾಶ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಎಲ್ಲಾ ರೀತಿಯಲ್ಲಿಯೂ ನಾವು ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ. ಭಾರತವೂ ಕೂಡ ನಮ್ಮೊಂದಿಗೆ ಅನೇಕ ಅಂಶಗಳಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತದೆ ಮತ್ತು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ವಿಶ್ವಾಸ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ಅಫ್ಘನ್ನರು ಭಾರತದೊಂದಿಗೆ ಸ್ನೇಹ ಬೆಳೆಸಲು ಬಯಸುತ್ತಿದ್ದಾರೆ” ಎಂದು ಹೇಳಿದ್ದಾನೆ.