ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ವಿಜಯ ಸಾಧಿಸಿದೆ. ಮೊದಲ ಮತ್ತು ಕೊನೆಯ ಪಂದ್ಯ ಮಳೆಯಿಂದ ರದ್ದಾದರೂ, ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಭಾರತ ತಂಡ ತೋರಿದ ಅದ್ಭುತ ಪ್ರದರ್ಶನದಿಂದ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಕೊನೆಯ ಪಂದ್ಯ ರದ್ದಾದ ನಂತರ ಟ್ರೋಫಿ ಸ್ವೀಕರಿಸಿದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಸಂತೋಷವನ್ನು ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, “ಕೊನೆಗೂ ಟ್ರೋಫಿಯನ್ನು ಮುಟ್ಟಲು ಸಾಧ್ಯವಾಗಿದ್ದು ತುಂಬಾ ಖುಷಿ ಕೊಟ್ಟಿದೆ. ಈ ಕ್ಷಣ ನನಗೆ ವಿಶೇಷ,” ಎಂದು ನಗುತ್ತಾ ಹೇಳಿದರು. ಅವರ ಈ ಮಾತು ನೇರವಾಗಿ ಏಷ್ಯಾಕಪ್ ಟ್ರೋಫಿ ವಿವಾದವನ್ನು ನೆನಪಿಸಿತು. ಏಷ್ಯಾಕಪ್ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆದರೂ, ಪಾಕಿಸ್ತಾನದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಟೀಮ್ ಇಂಡಿಯಾ ನಿರಾಕರಿಸಿತ್ತು.
ಆ ಘಟನೆಯ ನಂತರ ಟ್ರೋಫಿ ಭಾರತಕ್ಕೆ ಹಿಂತಿರುಗಿಸದಿರುವುದರಿಂದ ವಿವಾದ ಇನ್ನೂ ಮುಂದುವರಿದಿದೆ. ಸೂರ್ಯಕುಮಾರ್ ಅವರ ಈ ಪರೋಕ್ಷ ಕಮೆಂಟ್ನಿಂದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ಮೊದಲ ಸರಣಿ ಜಯಿಸಿರುವ ಸೂರ್ಯಕುಮಾರ್, ಈ ಬಾರಿ ನಿಜವಾಗಿಯೂ ಟ್ರೋಫಿ ಮುಟ್ಟಿದ ಖುಷಿಯನ್ನು ಸವಿದಿದ್ದಾರೆ.

