ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಬಳಿಕ ಕಾಂಗ್ರೆಸ್ ಕೂಡ ಮನವಿ ಸಲ್ಲಿಸಿದೆ.
ಈ ಕುರಿತು ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ , ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಬ್ಯಾಲೆಟ್ ತೋರಿಸಿದ್ದಾರೆ. ಮತದಾನದ ಬಳಿಕ ಡಿ.ಕೆ.ಶಿವಕುಮಾರ್ಗೆ ಬ್ಯಾಲೆಟ್ ತೋರಿಸಿ, ತದನಂತರ ತಮ್ಮ ಪಕ್ಷದ ಎಜೆಂಟ್ನತ್ತ ತೊರಿಸುತ್ತಾರೆ. ಈ ಬಗ್ಗೆ ನಾವು ರಿಟರ್ನಿಂಗ್ ಅಫೀಸರ್ಗೆ ದೂರು ನೀಡಿದ್ದೆವು. ಆದರೆ ಅವರು ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
ಮತದಾನದ ಏಜೆಂಟ್ ಆದ ನಾನು ಎಲೆಕ್ಷನ್ ಕಮಿಷನ್ಗೆ ದೂರು ಕೊಟ್ಟಿದ್ದೇನೆ. ಅವರಿಂದ ಸೂಕ್ತ ನಿರ್ಧಾರ ಕೈಗೊಳ್ಳುವ ಕಾರ್ಯ ಆಗಲಿದೆ ಎಂಬ ವಿಶ್ವಾಸ ಇದೆ. ಆರ್ಟಿಕಲ್ 324ರ ಪ್ರಕಾರ ನಾವು ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಜವಾಬ್ದಾರಿ ವಹಿಸಿಕೊಂಡಿದ್ದ ರಿಟರ್ನಿಂಗ್ ಆಫೀಸರ್ ಯಾವುದೇ ರೀತಿಯ ದಾಖಲೆ ನೀಡದೆ ನಮ್ಮ ಮನವಿ ತಿರಸ್ಕರಿಸಿದ್ದಾರೆ. ಸಿಸಿಟಿವಿ ದಾಖಲೆ ಸೇರಿದಂತೆ ಯಾವುದೇ ರೀತಿಯ ದಾಖಲೆ ಒದಗಿಸಿಲ್ಲ. ಈ ಎಲ್ಲ ವಿಚಾರವ ಪರಿಗಣಿಸಿ ನಾವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ರಾಥೋಡ್ ತಿಳಿಸಿದರು.
ರೇವಣ್ಣ ಮತ ಅಸಿಂಧು ಮಾಡಬೇಕು ಎಂದು ಕಾಂಗ್ರೆಸ್, ಬಿಜೆಪಿ ದೂರು ನೀಡಿವೆ. ದೂರು ಆಧರಿಸಿ ಆದೇಶ ನೀಡಿದ್ದ ಚುನಾವಣಾಧಿಕಾರಿ ಯಾವುದೇ ರೀತಿಯಿಂದಲೂ ಮತ ಅಸಿಂಧುಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸಹ ದೂರು ನೀಡಿದ್ದು, ಈ ಸಂಬಂಧ ವಿಚಾರಣೆ ನಡೆಸಿ ಚುನಾವಣಾ ಆಯೋಗ ತೀರ್ಪು ನೀಡಿದ ಬಳಿಕ ಮತ ಎಣಿಕೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.