ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ ಗಲಭೆ, ಪಾಕಿಸ್ತಾನದಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ, ಚೀನಾದ ಮುಖಂಡರೊoದಿಗೆ ಮಾತುಕತೆ ಗಮನಿಸಿದರೆ, ದೇಶದ್ರೋಹ ಕೃತ್ಯಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸತತ ಸೋಲಿನಿಂದ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಕಂಗೆಟ್ಟಿದ್ದಾರೆ. ಮಾನಸಿಕ ಸ್ಥಿತಿಮಿತಿ ಕಳೆದುಕೊಂಡು, ದೇಶದ ಜನತೆಯಲ್ಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.
ಅಗ್ನಿಪಥ ಯೋಜನೆ ವಿರೋಧದ ಗಲಭೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಬಿಜೆಪಿಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ನಡೆದಿದೆ. ಹೀಗಾಗಿಯೇ ಕಾಂಗ್ರೆಸ್ ನಾಯಕರು ದ್ರೋಹಿಗಳ ಜತೆಗೆ ಕೈಜೋಡಿಸಿ, ದೇಶಾದ್ಯಂತ ಇದೀಗ ಗಲಭೆ ಸೃಷ್ಠಿಸುತ್ತಿದ್ದಾರೆ ಎಂದು ಆಪಾದಿಸಿದರು.
ಪ್ರಸ್ತುತ ದೇಶದಲ್ಲಿ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆ. ಅಧಿಕಾರವಿಲ್ಲದ ಕಾಂಗ್ರೆಸ್ ನಾಯಕರು ಇಂಗು ತಿಂದ ಮಂಗನoತಾಗಿದ್ದಾರೆ. ಬಿಜೆಪಿ ಸರ್ಕಾರ ಮಣಿಸುವುದಕ್ಕೆ ಕೈ ನಾಯಕರು ಕುತಂತ್ರ ನಡೆಸಿದ್ದಾರೆ. ಸಮಾಜಘಾತಕ ಶಕ್ತಿಗಳಿಗೆ ಕ್ಷಮಿಸುವ ಮಾತೇ ಇಲ್ಲ ಎಂದರು.