ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿಪಥ್ ಯೋಜನೆ ಸಂಬಂಧ ಬೆಳಗಾವಿ ಬಂದ್ಗೆ ಯಾವುದೇ ರೀತಿ ಅನುಮತಿ ಇಲ್ಲ. ಅನುಮತಿ ಇಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ. ಬಿ ಬೋರಲಿಂಗಯ್ಯ ಎಚ್ಚರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಸಂಬಂಧ ನಾಳೆ ಬೆಳಗಾವಿ ಚಲೋ ಹಾಗೂ ಬೆಳಗಾವಿ ಬಂದ್ ಮಾಡಲು ಹೊರಟಿದ್ದಾರೆ. ಅವರು ಯಾವುದೇ ರೀತಿ ಮನವಿ ಮಾಡಿಕೊಂಡಿಲ್ಲ. ನಾಳೆ ಏನಾದರು ಅಹಿತಕರ ಘಟನೆಗಳು ಸಂಭವಿಸಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಸಂಪೂರ್ಣ ಸಿದ್ಧ. ಡ್ರೋನ್ ಕ್ಯಾಮರಾ ಉಪಯೋಗಿಸಿಕೊಂಡು ರೈಲ್ವೆ ನಿಲ್ದಾಣ ಸೇರಿದಂತೆ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಕಣ್ಗಾವಲು ಇಡುತ್ತೇವೆ. ಬಂದೋಬಸ್ತ್ ಬಗ್ಗೆಯೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಯಾವುದೇ ರೀತಿಯ ಪ್ರಚೋದನೆಗೆ ಕಿವಿಗೊಡದೆ ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಏನೇ ಮಾಡೋದು ಇದ್ದರೆ ಅನುಮತಿ ಪಡೆದು, ಶಾಂತಿ ಸುವ್ಯವಸ್ಥೆಯಿಂದ ಮಾಡಬಹುದು. ಆದರೆ, ಯಾವುದೇ ಅನುಮತಿ ಪಡೆಯದೇ ಗಲಾಟೆ, ದೊಂಬಿ ಮಾಡಲು ಬಂದರೆ ನಾವು ಯಾವುದಕ್ಕೂ ಬಿಡೋದಿಲ್ಲ ಎಂದು ಎಚ್ಚರಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ