-ಮಲ್ಲಿಕಾರ್ಜುನ ತುಂಗಳ
ವ್ಯಕ್ತಿಯೋರ್ವನಿಗೆ ವಯಸ್ಸಾಯಿತು ಎನ್ನುವುದರ ಹಿಂದೆ ಸಾವಿರ ಅರ್ಥಗಳಿರುತ್ತವೆ. ಹುಟ್ಟಿದ ಮೇಲೆ ವೃದ್ಧಾಪ್ಯ ಬರುವುದು ಶತಃಸಿದ್ಧ. ಹಾಗೆಂದು ವೃದ್ಧಾಪ್ಯ ಅಲಕ್ಷಿಸಲಾಗದು. ಹಿರಿಯ ನಾಗರಿಕರ ಬಗೆಗೆ ವಹಿಸಬೇಕಾದ ಕಾಳಜಿಯ ಕುರಿತಂತೆ ಇಲ್ಲೋರ್ವ 96ರ ವಯೋವೃದ್ಧ ಈಗಲೂ 16ರ ಯುವಕ ನಾಚುವಂತೆ ದಿನಂಪ್ರತಿ ಯೋಗದಿಂದ ಶರೀರ ಗಟ್ಟಿಗೊಳಿಸಿಕೊಳ್ಳುವಲ್ಲಿ ಕಾರಣರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ನಿವೃತ್ತ ಶಿಕ್ಷಕ ಮಲಕಪ್ಪ ಎಸ್. ಮುನ್ನೋಳ್ಳಿ ಅವರಿಗೆ ವಯಸ್ಸು ೯೬, ಇಂದಿಗೂ ಯಾವದೇ ಔಷ, ರೋಗವಿಲ್ಲದೇ ಬದುಕು ಸಾಗಿಸುತ್ತಿರುವ ಇವರು, ಇಂದಿಗೂ ಜನೋಪಕಾರಿಯಾಗಿ ಪರರ ಸಹಾಯಕ್ಕಾಗಿ ಮುಂಚೂಣಿಯಲ್ಲಿ ನಿಲ್ಲುತ್ತಿರುವುದು ನಿಜಕ್ಕೂ ವಿಶೇಷ.
ದಿನಂಪ್ರತಿ ಶಿಸ್ತು ಬದ್ಧ ಕಾಯಕ, ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ನೀರು ಸೇವನೆಯೊಂದಿಗೆ ಪ್ರಮುಖವಾಗಿ ಯೋಗಾಭ್ಯಾಸ ತಮ್ಮ ಚೈತನ್ಯಕ್ಕೆ ಮೂಲ ಕಾರಣವೆಂದು ಸ್ವತಃ ಮುನ್ನೋಳ್ಳಿಯವರ ಮಾತು. ಕಳೆದೊಂದು ದಶಕದಿಂದ ಯಾವದೇ ಮಾತ್ರೆ ತೆಗೆದುಕೊಳ್ಳದೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇನೆಂದು ಹಸನ್ಮುಖಿಯಾಗಿ ಹೇಳುತ್ತ, ಇಂದಿನ ಪೀಳಿಗೆಯೂ ಸಹಿತ ನಿರಂತರ ಯೋಗದಲ್ಲಿ ತೊಡಗಿದರೆ ರೋಗಮುಕ್ತ ಸಮಾಜವಾಗಲು ಸಾಧ್ಯವೆಂದರು. ನಿತ್ಯ ಒಂದು ಗಂಟೆಯ ಯೋಗವನ್ನು ಮಾಡುವ ಇವರು ಯುವಕರಿಗೆ ಮಾದರಿಯಾಗಿದ್ದಾರೆ.