ಹೊಸದಿಗಂತ ವರದಿ ಕಲಬುರಗಿ:
ಮಾನಸಿಕ ಅಸ್ವಸ್ಥನೋರ್ವ ಬಸವೇಶ್ವರ ಪುತ್ಥಳಿಗೆ ಕೆಂಪು ಬಟ್ಟೆ ಕಟ್ಟಿ ಅವಮಾನಗೈದ ಘಟನೆ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಇರುವ ಬಸವೇಶ್ವರ ಪ್ರತಿಮೆಯ ಮುಖಕ್ಕೆ ಅಸ್ವಸ್ಥ ಯುವಕ ಕೆಂಪು ಬಟ್ಟೆಕಟ್ಟಿದ್ದಾನೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮಾನಸಿಕ ಅಸ್ವಸ್ಥ ಯುವಕನಿಗೆ ಕುಮ್ಮಕ್ಕು ನೀಡಿ ಬಸವೇಶ್ವರ ಪ್ರತಿಮೆಗೆ ಅವಮಾನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಕಂಡು ಸಾರ್ವಜನಿಕರು ಮಾನಸಿಕ ಅಸ್ವಸ್ಥ ಯುವಕನನ್ನು ಹಿಡಿದು ವಿಚಾರಿಸಿದಾಗ, ಆತ ಯಾರೋ ಇಬ್ಬರು ಯುವಕರು ಹೇಳಿದ್ದರಿಂದ ಬಟ್ಟೆ ಕಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸಾರ್ವಜನಿಕರು ಮಾನಸಿಕ ಅಸ್ವಸ್ಥನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲೆ ಸೇರಿದಂತೆ ಹಲವೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.