ಹೊಸದಿಗಂತ ವರದಿ,ಶಿವಮೊಗ್ಗ:
ಪ್ರತಿ ಜಿಲ್ಲೆಯಿಂದ ಓರ್ವ ಕಾರ್ಮಿಕರ ಮಕ್ಕಳಿಗೆ ವಿಮಾನದ ಪೈಲಟ್ ಆಗುವ ಅವಕಾಶ ದೊರೆಯಲಿದೆ. ಇದಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಕಾರ್ಮಿಕ ಇಲಾಖೆ ಭರಿಸಲಿದೆ.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಈ ಘೋಷಣೆ ಮಾಡಿದ್ದಾರೆ.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ, ತರಬೇತಿ ಮತ್ತು ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಮಾನ ಪೈಲಟ್ ತರಬೇತಿಗೆ ಓವೇರಿಗೆ ಸುಮಾರು 37 ಲಕ್ಷ ರೂ. ವೆಚ್ಚ ತಗುಲಲಿದೆ. ಆದರೆ ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಇರಬಾರದು ಎನ್ನುವ ಕಾರಣಕ್ಕೆ 18 ತಿಂಗಳ ಪೈಲಟ್ ತರಬೇತಿಯನ್ನು ಕಾರ್ಮಿಕರ ಮಕ್ಕಳಿಗೂ ನೀಡುವ ಸಲುವಾಗಿ 31 ಜಿಲ್ಲೆಗಳಿಂದ ಒಟ್ಟು 31 ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.