– ಶಿವಕುಮಾರ ಬ್ಯಾಳಿ ಡಂಬಳ
ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ರೈತರು ವಿವಿಧ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಈ ಸಾಲಿಗೆ ಇದೀಗ ಡ್ರ್ಯಾಗನ್ ಫ್ರೂಟ್ ಸೇರ್ಪಡೆಯಾಗಿದೆ. ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಕೆಂಪು ಭೂಮಿಯಲ್ಲಿ ಕೆಂಪು ಹಣ್ಣಿನ ಕಂಪು ಹರಡಿಸಿದ್ದಾರೆ. ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಡ್ರ್ಯಾಗನ್ ಫ್ರೂಟ್ ಥೈಲ್ಯಾಂಡ್, ವಿಯೆಟ್ನಾಂ ಮತ್ತು ಶ್ರೀಲಂಕಾ ಸೇರಿದಂತೆ ಇತರೆ ಕೆಲವು ದೇಶಗಳ ಜನಪ್ರಿಯ ಬೆಳೆಯಾಗಿದೆ. ಹೋಬಳಿ ವ್ಯಾಪ್ತಿಯ ರೈತರು ತಮ್ಮ ಬೋರ್ವೆಲ್ಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಡೋಣಿ ಗ್ರಾಮದ ಶೇಖಪ್ಪ ರಾಚಪ್ಪ ಕದಾಂಪುರ ಎಂಬ ರೈತ ತಮ್ಮ 1 ಎಕರೆ ಜಮೀನಿನಲ್ಲಿ ಆರು ತಿಂಗಳ ಹಿಂದೆ 30 ಗುಂಟೆ ಪ್ರದೇಶದಲ್ಲಿ 4.50 ಲಕ್ಷ ರೂ. ಖರ್ಚು ಮಾಡಿ 2800 ಡ್ರ್ಯಾಗನ್ ಗಿಡಗಳನ್ನು ಬೆಳೆಸಿದ್ದಾರೆ. ಸದ್ಯ ಅವುಗಳು ಫಲ ಕೊಡುವ ಹಂತಕ್ಕೆ ಬಂದಿವೆ. ಅದರ ಮಧ್ಯದಲ್ಲಿ ಚೆಂಡು ಹೂವು ಬೆಳೆಯನ್ನು ಬೆಳೆದಿದ್ದಾರೆ. ಇನ್ನೂ ಡಂಬಳ ಗ್ರಾಮದ ಮೂರು ರೈತರು ತಲಾ ಒಬ್ಬರೂ ಅರ್ಧ ಎಕರೆ ಅಷ್ಟು ಡ್ರ್ಯಾಗನ್ ಬೆಳೆಗಳನ್ನು ಬೆಳೆದಿದ್ದಾರೆ.
ಡ್ರ್ಯಾಗನ್ ಫ್ರೂಟ್ ಸ್ಥಳೀಯ ಜತೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ರಫ್ತಾಗುತ್ತಿದೆ. ಬೆಂಗಳೂರು, ಕೇರಳ, ಮಹಾರಾಷ್ಟ, ಹೈದರಾಬಾದ್, ಮಂಗಳೂರಿನಲ್ಲಿ ಮಾರುಕಟ್ಟೆ ಕಳಿಸಲಾಗುತ್ತದೆ. ರೈತರು ಉತ್ತಮ ಆದಾಯ ನಿರೀಕ್ಷೆಯಲಿದ್ದಾರೆ.
ರೋಗ ಗುಣಪಡಿಸಲು ಸಹಕಾರಿ: ಡ್ರ್ಯಾಗನ್ ಫ್ರೂಟ್ ಹಲವು ರೋಗಗಳ ಶಮನಕ್ಕೆ ರಾಮಬಾಣವಾಗಿದೆ. ಹೃದಯ ಸಂಬಂ ಕಾಯಿಲೆ, ಮಧುಮೇಹ, ರಕ್ತದೊತ್ತಡ, ರಕ್ತಹೀನತೆ, ಕಿಡ್ನಿ ಸ್ಟೋನ್, ಕ್ಯಾನ್ಸರ್, ನರದೌರ್ಬಲ್ಯ ಸೇರಿ ವಿವಿಧ ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ ಎಂಬ ಅಭಿಪ್ರಾಯಗಳಿವೆ.
ಜೀವಾಮೃತ ಉತ್ತಮ: ಡ್ರ್ಯಾಗನ್ ಮತ್ತು ಅಂಜೂರ ಬೆಳೆಗಳಿಗೆ ತಿಂಗಳಿಗೊಮ್ಮೆ ಜೀವಾಮೃತ ಸಿಂಪರಿಸುವದನ್ನು ತಪ್ಪಿಸಬಾರದು. ಹಾಗೆಯೇ, ಗಿಡದ ಬುಡಕ್ಕೂ ಜೀವಾಮೃತ ಉಣಿಸಬೇಕು. ಜಾಸ್ತಿ ಕಸ ಬೆಳೆಯದಂತೆ ನಿಯಂತ್ರಿಸಬೇಕು. ಇದರಿಂದ ಬೆಳೆಗಳಿಗೆ ಯಾವುದೇ ರೋಗ ಕಾಣಿಸಿಕೊಳ್ಳವುದಿಲ್ಲ. ಹೀಗೆ ನಿರ್ವಹಣೆ ಮಾಡಿದ್ದರೆ. ಅಕ ಇಳುವರಿ ಪಡೆದುಕೊಳ್ಳಬಹುದು ಎನ್ನುತ್ತಾರೆ ರೈತರು.