ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಜನತೆ ಮೇಲೆ ನಂಬಿಕೆಯಿದ್ದು, ನನಗೆ ಎಕ್ಸಿಟ್ ಪೋಲ್ನಲ್ಲಿ ನಂಬಿಕೆಯಿಲ್ಲ. ಮಹಾಘಟಬಂಧನವೇ ಅಧಿಕಾರಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಬಿಹಾರದ ಮತದಾರರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಮಹಾಘಟಬಂಧನವೇ ಅಧಿಕಾರಕ್ಕೆ ಬರಲಿದೆ. ಯಾವ ಎಕ್ಸಿಟ್ ಪೋಲ್ಗಳ ಮೇಲೆಯೂ ನಂಬಿಕೆಯಿಲ್ಲ. ಅದು ಕರ್ನಾಟಕದಲ್ಲಿ ಆಗಿರಬಹುದು. ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ನಂತರ ಅವೆಲ್ಲಾ ಸುಳ್ಳಾಗಿದ್ದವು ಎಂದರು.
ಸಂಪುಟ ಪುನಾರಚನೆ ಸಂಬಂಧ ನವೆಂಬರ್ 15ರಂದು ಸಿಎಂ ದೆಹಲಿಗೆ ಹೋಗುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ಅಂದು ನಾನು ಸಹ ದೆಹಲಿಗೆ ಹೋಗುತ್ತಿದ್ದೇನೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರೊಂದಿಗೆ ಮಾತನಾಡಬೇಕಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ವಿಧಾನಪರಿಷತ್ ಪದವೀಧರ ಚುನಾವಣೆ ಸಂಬಂಧ ನಾಲ್ವರು ಅಭ್ಯರ್ಥಿಗಳನ್ನು ಇಂದು ಅಥವಾ ನಾಳೆಯೊಳಗೆ ಹೈಕಮಾಂಡ್ ಬಳಿ ಕಳುಹಿಸುವೆ ಎಂದರು.

