ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಲ ಬದಲಾಗುತ್ತಿದ್ದಂತೆ ನಮ್ಮ ಅಡುಗೆ ಮನೆಗಳೂ ಬದಲಾಗಿವೆ. ಒಂದೇ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ಕಡ್ಡಾಯವಾಗಿ ಇದ್ದ ಕಡೆಯುವ ಕಲ್ಲು, ಇಂದು ಮಿಕ್ಸರ್ ಗ್ರೈಂಡರ್ ಮತ್ತು ಆಧುನಿಕ ಯಂತ್ರಗಳ ನಡುವೆ ಮರೆತು ಹೋಗಿದೆ. ಆದರೆ, ಆ ಹಳೆಯ ಪದ್ಧತಿಯನ್ನು ಮತ್ತೆ ಜೀವಂತವಾಗಿಟ್ಟಿರುವ ಒಬ್ಬ ಹಿರಿಯರ ಕಥೆ ಇದೀಗ ಗಮನ ಸೆಳೆಯುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 66 ವರ್ಷದ ಸುಜೀರ್ ಪ್ರಭಾಕರ ಆಚಾರ್ಯರು ಇಂದಿಗೂ ತಮ್ಮ ಮನೆಯಲ್ಲೇ ಕಡೆಯುವ ಕಲ್ಲನ್ನು ಬಳಸುತ್ತಿದ್ದು, ಪತ್ನಿಗೆ ಅಡುಗೆ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದಾರೆ.
ಯಂತ್ರಗಳ ಸೌಲಭ್ಯಗಳ ನಡುವೆ, ಕಲ್ಲಿನಲ್ಲಿ ಕಡೆಯುವ ಪದಾರ್ಥಗಳ ರುಚಿ ಮತ್ತು ಆರೋಗ್ಯದ ಮಹತ್ವವನ್ನು ಅರಿತ ಅವರು, ಆ ಪದ್ಧತಿಯನ್ನು ಬಿಡದೇ ಮುಂದುವರಿಸಿಕೊಂಡು ಬಂದಿದ್ದಾರೆ.
ಅವರ ಪ್ರಕಾರ, ಕಡೆಯುವ ಕಲ್ಲಿನಲ್ಲಿ ತಯಾರಿಸಿದ ಚಟ್ನಿ, ಮಸಾಲೆಗಳು ಮತ್ತು ಇತರ ಪದಾರ್ಥಗಳಿಗೆ ಒಂದು ವಿಭಿನ್ನ ಸುವಾಸನೆ ಮತ್ತು ನೈಸರ್ಗಿಕ ರುಚಿ ಇರುತ್ತದೆ. ಯಂತ್ರಗಳಲ್ಲಿ ಸಿಗದ ಆ “ಅಸಲಿ ಟೇಸ್ಟ್” ಕಲ್ಲಿನಲ್ಲಿ ಮಾತ್ರ ಸಿಗುತ್ತದೆ ಎಂಬುದು ಅವರ ನಂಬಿಕೆ.
ಈ ಕಥೆಯಲ್ಲಿ ಮತ್ತೊಂದು ವಿಶೇಷ ಅಂಶವೆಂದರೆ, ತಮ್ಮ ಮನೆಯ ಕಡೆಯುವ ಕಲ್ಲಿಗೆ ಅವರು ಕಬ್ಬಿಣದ ಸ್ಟ್ಯಾಂಡ್ ತಯಾರಿಸಿದ್ದು. ಇದರಿಂದ ಬಳಸಲು ಸುಲಭವಾಗಿದ್ದು, ಹಳೆಯ ಪದ್ಧತಿಗೆ ಹೊಸ ಸ್ಪರ್ಶ ನೀಡಲಾಗಿದೆ. ಡಿಜಿಟಲ್ ಯುಗದಲ್ಲಿ ಎಲ್ಲವೂ ವೇಗವಾಗಿ ಸಾಗುತ್ತಿರುವಾಗ, ಸುಜೀರ್ ಆಚಾರ್ಯರಂತಹವರು ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುತ್ತಿರುವುದು ಒಂದು ಪ್ರೇರಣೆಯ ಕಥೆಯಾಗಿದೆ.



