Thursday, November 13, 2025

ರಾಜ್ಯದಲ್ಲಿ ಹಾವು ಕಡಿತ ಪ್ರಕರಣ​ ಹೆಚ್ಚಳ: 10 ತಿಂಗಳಲ್ಲಿ 18 ಸಾವಿರ ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹಾವುಗಳ ಕಡಿತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣದ ಪ್ರಭಾವದಿಂದಾಗಿ ಹಾವುಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು, ಅವುಗಳ ಕಡಿತ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ.

ಕೇವಲ 10 ತಿಂಗಳ ಅವಧಿಯಲ್ಲಿ 18 ಸಾವಿರಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು 125 ಜನ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲೇ 512 ಹಾವು ಕಡಿತ ಕೇಸ್​ಗಳು ಪತ್ತೆಯಾಗಿದ್ದು, ಆ ಪೈಕಿ ಮೂವರು ಅಸುನೀಗಿದ್ದಾರೆ.

ಹಾವು ಕಡಿತ ಕೇಸ್​​ಗಳ ಪೈಕಿ ಹಲವರು ಸಕಲಾದಲ್ಲಿ ಚಿಕಿತ್ಸೆ ಮತ್ತು ಔಷಧ ಸಿಗದೆ ಮೃತಪಟ್ಟಿದ್ದು, ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ಇರುವ ಔಷಧ ದಾಸ್ತಾನು ಇಟ್ಟುಕೊಳ್ಳವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಆಸ್ಪತ್ರೆಗಳಲ್ಲಿ ಬೇಡಿಕೆ ಇರುವಷ್ಟು ಆ್ಯಂಟಿ ಸ್ನೇಕ್‌ ವೀನೋಮ್ ಸ್ಟಾಕ್ ಇರಿಸುವಂತೆ ತಿಳಿಸಲಾಗಿದ್ದು, ಯಾವುದೇ ತರನಾದ ಹಾವು ಕಡಿದರೂ ನಿರ್ಲಕ್ಷ್ಯ ವಹಿಸದಂತೆ ಸಾರ್ವಜನಿಕರಿಗೂ ಸೂಚಿಸಲಾಗಿದೆ. ಹೀಗಿದ್ದರೂ ಜನ ನಿರ್ಲಕ್ಷ್ಯ ತೋರುತ್ತಿದ್ದು, ತುರ್ತು ಚಿಕಿತ್ಸೆ ಪಡೆಯುತ್ತಿಲ್ಲ. ಬದಲಾಗಿ ನಾಟಿ ಔಷಧಿಗಳ ಮೊರೆ ಹೋಗಿ ಅಂತಿಮ ಹಂತದಲ್ಲಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಹೀಗಾಗಿಯೇ ಹಾವು ಕಡಿತದಿಂದ ಮೃತರ ಸಂಖ್ಯೆಯೂ ಹೆಚ್ಚಳವಾಗಿದೆ ಎನ್ನಲಾಗಿದೆ.

error: Content is protected !!