ಹೊಸದಿಗಂತ ವರದಿ, ಹೊನ್ನಾವರ:
ಪ್ರವಾಹದಿಂದ ಅಪಾರ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿನ ಮಲ್ಲಾಪುರ, ಕಡತೋಕಾ, ಕೆಕ್ಕಾರ, ಹೂಜಿಮುರಿ, ಹೆಬ್ಳೆಕೊಪ್ಪ ಗ್ರಾಮದ ನೂರಾರು ಜನರನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಚಂದಾವರದ ಸ್ವಯಂ ಸೇವಕರು ಯಶಸ್ವಿಯಾದರು.
ಮಲ್ಲಾಪುರ, ಕಡತೋಕಾ, ಕೆಕ್ಕಾರ, ಹೂಜಿಮುರಿ, ಹೆಬ್ಳೆಕೊಪ್ಪ ಗ್ರಾಮದ ಜನವಸತಿ ಪ್ರದೇಶಗಳಿಗೆ ಏಕಾಏಕಿ ನೀರು ತುಂಬಿ ವಿಪರೀತ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು.
ವಿಷಯ ತಿಳಿದ ವಿಪತ್ತು ನಿರ್ವಹಣಾ ತಂಡ ತಕ್ಷಣ ಧಾವಿಸಿ ಕಡತೋಕಾ ಗ್ರಾಪಂ ದೋಣಿ ತರಿಸಿ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಅನಾರೋಗ್ಯ ಪೀಡಿತ ವೃದ್ಧರು, ಚಿಕ್ಕ ಮಕ್ಕಳು ಹೀಗೆ ಎಲ್ಲರನ್ನೂ ಸುರಕ್ಷಿತವಾಗಿ ಕೆಕ್ಕಾರ ನಂಬರ್ ಎರಡರ ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ತಲುಪಿಸಲಾಯಿತು. ಅನಾರೋಗ್ಯಕ್ಕೆ ಒಳಗಾಗಿದ್ದ ಓರ್ವ ವೃದ್ಧರನ್ನು ಆರೋಗ್ಯ ಕೇಂದ್ರಕ್ಕೆ ತಲುಪಿಸಲಾಯಿತು. ಆಳವಾದ ನೀರಿನಲ್ಲಿಯೂ ಸ್ವಯಂ ಸೇವಕರು ತಮ್ಮ ಜೀವದ ಹಂಗನ್ನು ತೊರೆದು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ದೊಡ್ಡ ಸವಾಲಾಗಿತ್ತು.
ಕಾರ್ಯಾಚರಣೆಯಲ್ಲಿ ಸ್ವಯಂ ಸೇವಕರಾದ ಮಣಿಕಂಠ, ನಾರಾಯಣ, ರವಿ, ವಿಜಯೇಂದ್ರ, ಪ್ರಶಾಂತ ನಾಯ್ಕ, ಸಂಯೋಜಕ ಶ್ರೀಧರ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.