ಹೊಸದಿಗಂತ ವರದಿ, ಕಾರವಾರ:
ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಗೋವಾ ಸರಾಯಿ ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ವಿಭಾಗದ ಪೊಲೀಸರ ತಂಡ ವಶಪಡಿಸಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಪೋಸ್ಟ್ ಆಫೀಸ್ ಬಳಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಿರೂರ್ ತಾಲೂಕಿನ ನಿವಾಸಿ ಸುಧಾಕರ ಅರ್ಜುನ ಗೋಲಾಂಡೆ ಬಂಧಿತ ಆರೋಪಿಯಾಗಿದ್ದು ಈತ ಕಂಟೇನರ್ ಲಾರಿಯಲ್ಲಿ ಗೋವಾದಿಂದ ಹೈದರಾಬಾದ್ ಕಡೆಗೆ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 814 ಬಾಕ್ಸ್ 30212 ಗೋವಾ ಸರಾಯಿ ಬಾಟಲಿಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ನಿಖರ ಮಾಹಿತಿ ಆಧಾರದ ಮೇಲೆ ಜಿಲ್ಲಾ ವಿಶೇಷ ದಳದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಕಂಟೇನರ್ ಸಹಿತ ಅಕ್ರಮ ಸರಾಯಿ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ತಂಡಕ್ಕೆ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.