ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪ್ರತೀಕವಾಗಿ ಕುರುಕ್ಷೇತ್ರದಲ್ಲಿ ದುಷ್ಟತನ ನಿವಾರಣೆ ಮಾಡಿದ ಭೀಮಸೇನ ದೇವರ 32ಅಡಿ ಏಕಾಶಿಲೆ ಪ್ರತಿಮೆ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಉಡುಪಿಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಮಲ್ಲೇಶ್ವರದ ಶ್ರೀಪಲಿಮಾರು ಶಾಖಾ ಮಠದಲ್ಲಿ 44ನೇ ಚಾತುರ್ಮಾಸ್ಯ ವ್ರತ ದೀಕ್ಷೆ ಕೈಗೊಂಡಿರುವ ಪಲಿಮಾರು ಶ್ರೀಗಳು ಸುದ್ದಿಗೋಷ್ಠಿ ನಡೆಸಿ, ವಾಯುದೇವರ ಮೂರು ಅವತಾರಗಳ ವಿಗ್ರಹ ಸ್ಥಾಪನೆ ಮಾಡಲಾಗುತ್ತಿದೆ. ಈಗಾಗಲೇ ಹರಿದ್ವಾರದಲ್ಲಿ ಹನುಮಂತ ದೇವರ 32 ಅಡಿಯ ಏಕಾಶಿಲಾ ಪ್ರತಿಮೆ, ಉಡುಪಿಯ ಕುಂಜಾರುಗಿರಿಯಲ್ಲಿ ಮಧ್ವಚಾರ್ಯ 32 ಅಡಿಯ ಏಕಾಶಿಲಾ ವಿಗ್ರಹ ಸ್ಥಾಪನೆಯಾಗಿದೆ. ಇದೀಗ ಕುರುಕ್ಷೇತ್ರದಲ್ಲಿ ಭೀಮಸೇನರ 32 ಅಡಿಯ ಏಕಾಶಿಲಾ ವಿಗ್ರಹ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದರು.
ತಮಿಳುನಾಡಿನ ಸೇಲಂನಲ್ಲಿ ಪ್ರತಿಮೆ ಕೆತ್ತನೆ ಕೆಲಸ ಆರಂಭವಾಗಿದ್ದು, ಪ್ರಸಕ್ತ ಶೇ. 60ರಷ್ಟು ಕೆಲಸ ಮುಗಿದಿದೆ. ಕುರುಕ್ಷೇತ್ರದಲ್ಲಿ ಎರಡುವರೆ ಎಕರೆ ವಿಸ್ತೀರ್ಣದ ಜಾಗದಲ್ಲಿ 10ಕೋಟಿ ರೂ. ವೆಚ್ಚದಲ್ಲಿ ಭೀಮಸೇನ ದೇವರ ಪ್ರತಿಮೆ ಸ್ಥಾಪನೆಯಾಗಲಿದೆ. ಗೋಶಾಲೆ, ಪ್ರವಚನ ಮಂದಿರ ಮತ್ತು ಯಜ್ಞ ಶಾಲೆ, ವೇದ ಉಪನಿಷತ್ತು ಅಧ್ಯಯನ ಕೇಂದ್ರ, ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಅಲ್ಲಿ ಮಾಡಲಾಗುತ್ತದೆ ಎಂದು ವಿವರಿಸಿದರು.
ಇಂದಿನ ಯುವಕರಿಗೆ ಭಾರತದ ಸಂಸ್ಕೃತಿ , ಸಂಪ್ರದಾಯ, ಧರ್ಮವನ್ನು ಉಳಿಸುವ ಕಾಪಾಡುವ ಶಕ್ತಿ ಲಭಿಸಲಿ. ಚಾತುರ್ಮಾಸ್ಯ ಅಂಗವಾಗಿ ಪ್ರತಿದಿನ ಸಂಜೆ 6-7 ಗಂಟೆಯವರೆಗೆ ಪ್ರವಚನ ನಡೆಯುತ್ತಿದೆ. ಪಲಿಮಾರು ಮಠದಿಂದ ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿದರು.