ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಮಾಜಿ ಸಚಿವ ಉದಯ್ ಸಾಮಂತ್ ಅವರ ಕಾರಿನ ಮೇಲೆ ಮಂಗಳವಾರ ಕೆಲವು ಶಿವಸೈನಿಕರು ದಾಳಿ ಮಾಡಿದ್ದಾರೆ ಎನ್ನಲಾಗಿದ್ದು ಪುಣೆಯ ಕತ್ರಾಜ್ ಚೌಕ್ ಬಳಿ ಘಟನೆ ನಡೆದಿದೆ. ಕತ್ರಾಜ್ ಚೌಕ್ ಬಳಿ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಸಭೆ ಕರೆದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ವರದಿ ಮಾಡಿವೆ.
ಉದಯ್ ಸಾಮಂತ್ ಅವರು ಬಂಡಾಯದ ನಾಯಕ ಹಾಗು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 40 ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದಾರೆ. ಆದಿತ್ಯ ಠಾಕ್ರೆ ಕರೆದ ಸಭೆಯ ಸ್ಥಳದ ಬಳಿ ಉದಯ್ ಸಮಂತ್ ಅವರ ಬೆಂಗಾವಲು ಪಡೆ ಹಾದು ಹೋಗುತ್ತಿತ್ತು. ಶಿವಸೈನಿಕರು ಅವರ ಕಾರನ್ನು ನೋಡಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಕೆಲವರು ಕಾರಿನ ಗಾಜು ಹೊಡೆದು ಒಡೆದರು ಎನ್ನಲಾಗಿದ್ದು ಶಿವ ಸೈನಿಕರ ಗುಂಪೊಂದು ಸಮಂತ್ ಅವರ ವಾಹನವನ್ನು ಸುತ್ತುವರಿಯಲು ಪ್ರಯತ್ನಿಸುತ್ತಿರುವ ಮತ್ತು ಘೋಷಣೆಗಳನ್ನು ಕೂಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
ಈ ಕುರಿತು ಸಾಮಂತ್ ಅವರು ಪೋಲೀಸರಿಗೆ ದೂರು ನೀಡಿದ್ದು ಕಿಡಿಗೇಡಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಏಕನಾಥ ಶಿಂಧೆ ಪ್ರತಿಕ್ರಿಯಿಸಿದ್ದು ಇದೊಂದು ಹೇಡಿಗಳ ಕೃತ್ಯ, ಪ್ರತಿಯೊಬ್ಬರೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು, ಎಲ್ಲಾ ನಿಯಮಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.