ಹೊಸದಿಗಂತ ಡಿಜಿಟಲ್ ಡೆಸ್ಕ್, ರಾಯಚೂರು:
ಶ್ರೀಗುರುರಾಯರ 351ನೇ ಆರಾಧನಾ ಮಹೋತ್ಸವ ಅತ್ಯಂತ ವಿದ್ಯುಕ್ತವಾಗಿ ಆರಂಭಗೊಂಡಿತು. ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.
ಮಹಾಮಂಗಳಾರತಿ ನಂತರ ಮಂಚಾಲಮ್ಮ ಪೂಜೆ ನೆರವೇರಿಸಲಾಯಿತು. ಗೋವು, ಅಶ್ವ ಮೊದಲಾದ ಪೂಜೆ ನೆರವೇರಿಸಿದ ನಂತರ ಮಂತ್ರಘೋಷಗಳೊಂದಿಗೆ ಧ್ವಜಾರೋಹಣ ನಡೆಸಲಾಯಿತು. ಆರಾಧನಾ ಮಹೋತ್ಸವದ ಸಪ್ತ ರಾತ್ರೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಗಳು ಆಡಳಿತ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳಿಂದ ಮಠದ ಮುಂಭಾಗದಲ್ಲಿ ಅತ್ಯಂತ ಆಕರ್ಷಕ ಮತ್ತು ವಿಶಾಲವಾಗಿ ನಿರ್ಮಿಸಿದ ಮಧ್ವಮಾರ್ಗ ಉದ್ಘಾಟಿಸಲಾಯಿತು.
2ನೇ ಮಹಡಿಯನ್ನು ಸಾಂಕೇತಿಕವಾಗಿ ಆರಂಭಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಪೀಠಾಪತಿಗಳು ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು, ಕಲ್ಪವೃಕ್ಷ ಅವರ ಆರಾಧನಾ ಮಹೋತ್ಸವ ಚಾಲನೆ ಪಡೆದಿದೆ. ಭಕ್ತರ ದೇಣಿಗೆಯಿಂದ ಬಹುಕೋಟಿ ವೆಚ್ಚದಲ್ಲಿ ಮಧ್ವ ಮಹಾಮಾರ್ಗ ಕಾರಿಡಾರ್ ಉದ್ಘಾಟಿಸಲಾಗಿದೆ ಎಂದರು.
ಕೇವಲ ಒಂದುವರೆ ತಿಂಗಳಲ್ಲಿ ನಿರ್ಮಿಸಿದ ಎರಡನೇ ಮಹಡಿ ಕಟ್ಟಡ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಆರಾಧನಾ ಮಹೋತ್ಸವದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು 7 ದಿನಗಳು ನಡೆಸಲಾಗುತ್ತದೆ. ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ರಾಘವೇಂದ್ರ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಆರಾಧನಾ ಮಹೋತ್ಸವ ನಿರ್ವಿಘ್ನವಾಗಿ ನಡೆಯಲಿ ಎಂದು ಅವರು ರಾಯರಲ್ಲಿ ಪ್ರಾರ್ಥಿಸಿದರು.
ರಾಯರ 351ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯ ಮಠ ಅತ್ಯಂತ ಆಕರ್ಷಕವಾಗಿ ಅಲಂಕಾರಗೊಂಡಿತ್ತು. ಮಂತ್ರಾಲಯ ಜಗಜಗಿಸುವ ದೀಪಗಳ ಮಧ್ಯೆ ಬಣ್ಣ ಬಣ್ಣದ ವೈಶಿಷ್ಟ್ಯಗಳಿಂದ ಭಕ್ತರ ಕಣ್ಮನ ಸೆಳೆಯುವಂತಿತ್ತು. ತುಂಗಭದ್ರಾ ನದಿಯು ಮೈದುಂಬಿದ ಹರಿಯುತ್ತಿದ್ದು, ಭಕ್ತರು ನಿರ್ವಿಘ್ನವಾಗಿ ಆರಾಧನೆಯಲ್ಲಿ ಪಾಲ್ಗೊಳ್ಳುವಂತೆ ತುಂಗಭದ್ರೆ ತಾಯಿ ಆಶೀರ್ವದಿಸಿದ್ದಾರೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ